ಮೈಸೂರು: ಕೊಬ್ಬಿರುವ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಶ್ಲೋಕದಲ್ಲಿಯೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ ಆಮೇಲೆ ನೆನಪು ಆದರೆ ಹೇಳ್ತೀನಿ. ದನದ ಮಾಂಸದ ಬಗ್ಗೆ ಶ್ಲೋಕ ಬರೆಯಲಾಗಿದೆ. ಶ್ಲೋಕ ಬರೆದಿರೋದು ಯಾರಪ್ಪ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಂಸ್ಕೃತ ಗೊತ್ತಿರುವವರು ತಾನೇ ಶ್ಲೋಕ ಬರೆಯೋದು. ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದ್ಯಾ? ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳ್ತೀನಿ. ಈಗ ಹೇಳಿದ್ರೆ ಅದನ್ನ ಕಾಂಟ್ರವರ್ಸಿ ಮಾಡಿ ಬಿಡುತ್ತಾರೆ. ನಾನು ಹೇಳಿದ ಕಾಂಟೆಸ್ಟ್ ಬಿಟ್ಟು ಬೇರೆ ಅರ್ಥದಲ್ಲಿ ಅದನ್ನ ಹೇಳಿಬಿಡುತ್ತಾರೆ. ಅದಕ್ಕೆ ಶ್ಲೋಕವನ್ನ ಸರಿಯಾಗಿಯೇ ಹೇಳ್ತೀನಿ ಎಂದು ತಿಳಿಸಿದರು.
ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ತಿನ್ನಬೇಕು ಅನ್ಸಿದ್ರೆ ತಿನ್ನುತ್ತೇನೆ. ಅದನ್ನ ಕೇಳೋಕೆ ಇವರು ಯಾರು ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಮತ್ತೆ ಗೋಮಾಂಸ ಕುರಿತು ಬಿಜೆಪಿಗರನ್ನು ಕುಟುಕಿದ್ದಾರೆ. ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸೋಕೆ ಇವರ್ಯಾರು. ಯಡಿಯೂರಪ್ಪಗೆ ಗೊತ್ತಿಲ್ಲ ಹೇಳ್ತಿನಿ ಕೇಳಿ. ನಾನು ಕ್ಲೀಯರ್ ಆಗಿ ಹೇಳುತ್ತೇನೆ. ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ. ಆದ್ರೆ ತಿನ್ನಬೇಕು ಅನ್ನಿಸಿದ್ರೆ ತಿಂತೀನಿ. ನಾನು ತಿಂದಿರೋದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಗೋಮಾಂಸ ತಿನ್ನೋದೆ ಸಾಧನೆ ಅಂತ ಹೇಳಿದ್ದಾನೆ. ಆದರೆ ನಾನೇನು ಅವನ ಥರ ಸೊಪ್ಪು ತಿನ್ನಲೇ. ನಾನು ಸೋಪ್ಪು ಬೇಕು ಅಂದ್ರೆ ಸೋಪ್ಪು ತಿಂತೀನಿ. ಮಾಂಸ ಬೇಕು ಅಂದ್ರೆ ಮಾಂಸ ತಿಂತೀನಿ. ನಾನೇನಾದ್ರು ನಿಂಗೆ ಹೇಳಿದ್ದೀನಾ ಮಾಂಸ ತಿನ್ನು ಅಂತ?. ಮತ್ತೆ ಸುಮ್ಮನೆ ತಿನ್ನೋರಿಗೆ ಯಾಕೆ ಪ್ರಶ್ನೆ ಮಾಡ್ತೀಯಾ. ಜಗತ್ತಿನಲ್ಲಿ ಮಾಂಸಹಾರಿಗಳೆ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ. ಹಾಗಾದ್ರೆ ಅಮೇರಿಕಾದಲ್ಲಿ ಇರೋರು ಪ್ರಾಣಿಗಳಾ..?, ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋರು ದನ ತಿಂತಾರೆ. ಹಾಗಾದ್ರೆ ಅವರೆಲ್ಲ ಪ್ರಾಣಿಗಳಾ?, ನಿಮಗೆ ಸೋಪ್ಪು ಇಷ್ಟ ಇದ್ರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನೋಕೆ ಬಿಡಿ ಎಂದು ಬಿಎಸ್ವೈ ವಿರುದ್ಧ ಮಾಜಿ ಸಿಎಂ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.