ಮಡಿಕೇರಿ: ಕೊರೊನಾ ಹರಡುವ ಆತಂಕದಿಂದ ದೇಶವನ್ನು ಲಾಕ್ಡೌನ್ ಮಾಡಿದ ಎರಡೂವರೆ ತಿಂಗಳ ಬಳಿಕ ಹೋಟೆಲ್ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಲ್ಲಿ ಕುಳಿತು ಆಹಾರ ಸೇವಿಸಲು ಮತ್ತು ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಕೊಡಗಿನ ಹೋಟೆಲ್, ರೆಸಾರ್ಟ್ ಮತ್ತು ಹೋಮ್ ಸ್ಟೇಗಳಲ್ಲಿ ಮಾತ್ರ ಗ್ರಾಹಕರೇ ಇಲ್ಲದೆ ಸಂಪೂರ್ಣ ಖಾಲಿ ಖಾಲಿಯಾಗಿವೆ.
ಬಹುತೇಕ ಎಲ್ಲವೂ ಲಾಕ್ಡೌನ್ ನಿಂದ ಮುಕ್ತವಾಗಿರುವುದರಿಂದ ರೆಸ್ಟೋರೆಂಟ್ ಗಳತ್ತ ಪ್ರವಾಸಿಗರು, ಜನರು ಬರುವ ನಿರೀಕ್ಷೆ ಇತ್ತು. ಅದಕ್ಕಾಗಿಯೇ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದವು. ಹೋಟೆಲ್ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಸ್ಯಾನಿಟೈರ್ ವ್ಯವಸ್ಥೆಯನ್ನು ಮಾಡಿವೆ. ಅಲ್ಲದೆ ರಿಸೆಪ್ಷನ್ ಸ್ಥಳದಲ್ಲಿ ಕೂಡ ಸಾಮಾಜಿಕ ಅಂತ ಕಾಪಾಡುವುದಕ್ಕಾಗಿ ಮಾರ್ಕ್ ಗಳನ್ನು ಮಾಡಲಾಗಿದೆ. ಅಲ್ಲದೆ ಯಾವ ರಾಜ್ಯದಿಂದ ಬಂದಿದ್ದಾರೆ, ಅವರ ಆರೋಗ್ಯದ ಸ್ಥಿತಿ ಹೇಗಿದೆ ಎಂಬುದನ್ನೆಲ್ಲಾ ತಿಳಿದುಕೊಳ್ಳುವುದಕ್ಕಾಗಿ ಪ್ರತ್ಯೇಕವಾಗಿ ಎಲ್ಲಾ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.
ಪ್ರವಾಸಿಗರು ಮತ್ತು ಜನರೇ ಇಲ್ಲದೆ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ. ಪ್ರವಾಸಿಗರು ಅಥವಾ ಜನರು ರೆಸ್ಟೋರೆಂಟ್ಗಳಿಗೆ ಬರುತ್ತಾರೆಂದೇ ಆಹಾರ ಪದಾರ್ಥಗಳನ್ನು ಕೂಡ ರೆಡಿಮಾಡಿಕೊಂಡಿದ್ದವು. ಆದರೆ ಒಬ್ಬೇ ಒಬ್ಬ ಪ್ರವಾಸಿಗರು ಇತ್ತ ತಿರುಗಿ ನೋಡಿಲ್ಲ. ಅದರಲ್ಲೂ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕೊಡಗು ಜಿಲ್ಲೆಯ ಹೋಟೆಲ್, ರೆಸಾರ್ಟ್ ಗಳು ಸಂಪೂರ್ಣ ಸ್ಥಬ್ಧವಾಗಿವೆ.
ಒಟ್ಟಿನಲ್ಲಿ ಆರ್ಥಿಕ ಚಟುವಟಿಕೆಗೆ ಚುರುಕು ನೀಡಲು ಸರ್ಕಾರ ಬಹುತೇಕ ಲಾಕ್ಡೌನ್ ಫ್ರೀ ಮಾಡಿದ್ದರೂ ಜನರು ಮಾತ್ರ ಕೊರೊನಾ ಆತಂಕದಿಂದ ಹೊರಬಂದಿಲ್ಲ. ಹೀಗಾಗಿ ಕೊಡಗಿನ ಆರ್ಥಿಕ ಚಟುವಟಿಕೆ ಇನ್ನೂ ನಿದ್ರಾವಸ್ಥೆಯಲ್ಲಿದೆ ಎನ್ನುವಂತಾಗಿದೆ.