ಮಡಿಕೇರಿ: ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಇಂದು ನಡೆದಿದೆ.
ತಿರುಚ್ಚನಪಳ್ಳಿಯ ಏಳುಮಲೈ(50) ಮೃತರಾಗಿದ್ದಾರೆ. ತಮಿಳುನಾಡು ಮೂಲದವರಾಗಿದ್ದು, ಪ್ರಭುಗಣಪತಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಲೈನ್ ಮನೆಯ ಬಳಿಯ ಹೊಳೆಗೆ ತೆರಳಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಆನೆ ತೀವ್ರವಾಗಿ ಘಾಸಿಗೊಳಿಸಿ ಸ್ಥಳದಲ್ಲೇ ಕೂಲಿ ಕಾರ್ಮಿಕನನ್ನು ಕೊಂದು ಹಾಕಿದೆ.
ಕಳೆದ ಒಂದು ವಾರದಿಂದ ಹಲಸಿನ ಹಣ್ಣನ್ನು ತಿನ್ನಲು ಹಿಂಡು ಹಿಂಡು ಕಾಡಾನೆಗಳು ಈ ಭಾಗದಲ್ಲಿ ಲಗ್ಗೆ ಇಡುತ್ತಿವೆ. ಗ್ರಾಮದಲ್ಲಿ ಆತಂಕ ಮೂಡಿದ್ದು, ಕಾರ್ಮಿಕ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಳುಮಲೈ ಅವರ ಮೃತದೇಹವನ್ನು ತಿರುಚ್ಚನಪಳ್ಳಿಗೆ ಕೊಂಡೊಯ್ಯುವುದಾಗಿ ಕುಟುಂಬ ವರ್ಗ ತಿಳಿಸಿದೆ.