ಬೆಂಗಳೂರು: ವರ್ಗಾವಣೆ ಕೋರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಸಚಿವರಿಗೆ ಮನವಿಯನ್ನ ಮಾಡಿದ್ದು, ಸಚಿವರು ಕೊಟ್ಟ ಭರವಸೆ ತಪ್ಪಿದ್ರೆ ಮತ್ತೊಂದು ಹೋರಾಟಕ್ಕೆ ಸಜ್ಜಾಗ್ತೇವೆ ಅಂತ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದೆ.
ಕೊರೊನಾ ಹೊಡೆತಕ್ಕೆ ಶಿಕ್ಷಕರ ಬದುಕು ದುಸ್ಥರವಾಗಿದೆ. ಸ್ವಯಂ ಜಿಲ್ಲೆಗಳಿಂದ ಬೇರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸ್ತಿದ್ದ ಶಿಕ್ಷಕರು, ವರ್ಗಾವಣೆ ಕೋರಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ರನ್ನ ಭೇಟಿ ಮಾಡಿದ್ರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಚಿವರನ್ನ ಭೇಟಿ ಮಾಡಿದ ಶಿಕ್ಷಕರ ನಿಯೋಗ, ತಮಗೆ ಆಗ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿ, ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ರು. ಮನವಿಯನ್ನ ಸ್ವೀಕರಿಸಿದ ಸಚಿವರು, 10 ದಿನಗಳ ಒಳಗಾಗಿ ವರ್ಗಾವಣೆ ಆರಂಭಿಸುವುದಾಗಿ ಸ್ಪಷ್ಟ ಭರವಸೆ ನೀಡಿದ್ರು.
ಹಲವು ದಿನಗಳಿಂದ ವರ್ಗಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ವರ್ಗಾವಣೆಯಾಗದ ಹಿನ್ನೆಲೆ, ಹಲವು ಶಿಕ್ಷಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ವರ್ಗಾವಣೆ ಕೋರಿ ಮನವಿ ಪತ್ರವನ್ನ ನೀಡಲು ಇಂದು ಬೆಳಗ್ಗೆ 6 ಗಂಟೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶಿಕ್ಷಣ ಸಚಿವರ ನಿವಾಸಕ್ಕೆ ಭೇಟಿ ನೀಡಿ, ಮನವಿಯನ್ನು ಸಲ್ಲಿಸಿದ್ರು.
ವರ್ಗಾವಣೆ ವಿಷಯದಲ್ಲಿ ರಾಜ್ಯದ ಶಿಕ್ಷಕರು ಗೊಂದಲದಲ್ಲಿರುವ ವಿಷಯ ಸಚಿವರ ಗಮನಕ್ಕೆ ತಂದಾಗ, 5 ರಿಂದ 10 ದಿನಗಳ ಒಳಗಾಗಿ ವರ್ಗಾವಣೆ ಪ್ರಕ್ರಿಯೆಗಳನ್ನು ಖಂಡಿತವಾಗಿ ಪ್ರಾರಂಭಿಸುವುದಾಗಿ ತಿಳಿಸಿದರು. ಸಚಿವರು ಕೊಟ್ಟ ಭರವಸೆ ತಪ್ಪಿದ್ರೆ ಅನಿವಾರ್ಯವಾಗಿ ಹೋರಾಟಕ್ಕೆ ಸಜ್ಜಾಗ್ತೇವೆ ಎಂದು ರಾಜ್ಯ ಸಂಘ ಎಚ್ಚರಿಕೆ ನೀಡಿದೆ.