ಬೆಂಗಳೂರು: ಸೋಮವಾರದಿಂದ 19 ಜಿಲ್ಲೆಗಳಲ್ಲಿ ಅನ್ಲಾಕ್ ಆರಂಭವಾಗಲಿದೆ. ಮೊದಲ ಹಂತದ ಅನ್ಲಾಕ್ ನಲ್ಲಿ ಕೈಗಾರಿಕೆಗೆ ವಿನಾಯಿತಿ ಕೊಟ್ರು, ಕೈಗಾರಿಕಾ ವಲಯದ ಸಿಬ್ಬಂದಿ ಖುಷಿಯಾಗಿಲ್ಲ. ಕೈಗಾರಿಕೆಗಳಲ್ಲಿ ಮರುಜೀವ ಬಂದಂತಾದರೂ ಕೆಲವು ನಿರ್ಬಂಧಗಳಿಂದ ಮತ್ತೆ ಸಂಕಷ್ಟಕ್ಕೀಡಾಗಲಿವೆ ಅನ್ನೋದು ಕೈಗಾರಿಕೆಗಳ ವಾದ.
ಸಾಮಾನ್ಯ ಸ್ಥಿತಿಗೆ ಮರಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅನ್ಲಾಕ್ ಘೋಷಣೆ ಮಾಡಿ ಕೈಗಾರಿಕೆಗಳಿಗೆ ಶೇ.50ರಷ್ಟು ಕಾರ್ಮಿಕರ ನ್ನೊಳಗೊಂಡು ಕಾರ್ಯನಿರ್ವಹಿಸುವ ಅನುಮತಿ ನೀಡಿದೆ. ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆಯೆ ಮೇಲೆ ಅವಲಂಬಿತವಾಗಿದ್ದಾರೆ. ಆದರೆ ಸರ್ಕಾರದ ಮಾರ್ಗಸೂಚಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿಸಲಾಗಿದೆ. ಈ ನಿರ್ಧಾರದಿಂದ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ನೀಡಿರುವ ಅನುಮತಿಯೂ ಉಪಯೋಗವಿಲ್ಲದಂತಾಗಿದೆ. ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾದರೆ ಮಾತ್ರ ಉದ್ದೇಶ ಅರ್ಥಪೂರ್ಣವಾಗುತ್ತದೆ.
ಈ ನಿಟ್ಟಿನಲ್ಲಿ ಸರ್ಕಾರವು ಕೈಗಾರಿಕಾ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕಾರ್ಮಿಕರು ಸುಲಲಿತವಾಗಿ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸುವಂತೆ ಕಾಸಿಯಾ ಮನವಿ ಮಾಡಿಕೊಂಡಿದೆ.