– ಜಮೀರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ
ಗದಗ: ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಟಕವಾಡುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸುವ ಹಾಗೂ ಬೆಂಗಳೂರು ಗಲಬೇ ಕುರಿತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ರೈತರಿಗೆ ಸ್ವಯಂ ಅಧಿಕಾರ ಸರ್ಕಾರ ಕೊಟ್ಟಿದೆ. ಯಾರು ಬೇಕಾದರೂ, ಎಲ್ಲಿಬೇಕಾದ್ರೂ ಭೂಮಿ ಕೊಂಡುಕೊಳ್ಳಬಹುದು. ಇದು ರೈತರಿಗೆ ಮರಣ ಶಾಸನ ಅಲ್ಲಾ ರೈತನಿಗೆ ಕೊಟ್ಟ ಸರ್ಕಾರ ವಿಶೇಷ ಅಧಿಕಾರ ಎಂದರು.
ಕಾಂಗ್ರೆಸ್ಸಿನವರಿಗೆ ಹೇಳೊಕೆ ಬೇರೆನು ಕೆಲಸ, ಮಾತಿಲ್ಲ. ಭೂಸುಧಾರಣಾ ಬಗ್ಗೆ ಮಾತನಾಡುವವರು ಕೆಜಿ ಹಳ್ಳಿ, ಜೆಡಿ ಹಳ್ಳಿ ಪ್ರಕರಣ ಹೇಳಲಿ? ಅದನ್ನು ಬಿಡ್ತಾರೆ ಗಲಭೆ ಮುಚ್ಚಿಕೊಳ್ಳಲು ಯಾವುದಕ್ಕಾದ್ರೂ ಹೋಗ್ತಾರೆ. ಒಬ್ಬ ದಲಿತ ಶಾಸಕನಿಗೆ ರಕ್ಷಣೆ ಕೊಡಲು ಅವರಿಂದಲೇ ಆಗ್ತಿಲ್ಲ. ಕಾಂಗ್ರೆಸ್ ಶಾಸಕನಿಗೆ ಸಾಂತ್ವನ ಹೇಳಲು ಎಷ್ಟು ಅವರ ನಾಯಕರು, ಎಷ್ಟು ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಹೇಳಲಿ ಅಂತ ಕಾಂಗ್ರೆಸ್ ನಾಯಕರಿಗೆ ಸಚಿವ ಸಿ.ಸಿ ಪಾಟೀಲ್ ಸವಾಲು ಹಾಕಿದರು.
ಶಾಸಕ ಜಮೀರ್ ಅಹ್ಮದ್ ಗಲಭೆಕೊರರನ್ನು ಪ್ರೋತ್ಸಾಹಿಸಿದ್ದಕ್ಕೆ ಏಕವಚನದಲ್ಲಿ ನಿಂದಿಸಿದ್ದಾರೆ. ಪಾದರಾಯನಪುರ ಗಲಾಟೆಯಲ್ಲಿ ಜೈಲಿನಿಂದ ಬಂದವರಿಗೆ ಜಮೀರ್ ಅಹ್ಮದ್ ಸನ್ಮಾನ ಮಾಡಿದ. ಈಗ ಗಲಭೆಯಲ್ಲಿ ಮೃತರಿಗೆ ಪರಿಹಾರ ನೀಡಲು ಮುಂದಾದ. ಅವರೇನು ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಡಿದ್ರಾ? ಯಡಿಯೂರಪ್ಪ ಮುಖ್ಯಮಂತ್ರಿಯಾದ್ರೆ ಮನೆಮುಂದೆ ವಾಚ್ಮೆನ್ ಆಗ್ತೀನಿ ಅಂದಿದ್ದ ಜಮೀರ್ ನಾಲಿಗೆಗೆ ಇತಿ-ಮಿತಿ ಇರಬೇಕು. ಪರಿಹಾರ ಅವರ ಹಣ ಅವರು ಕೊಡಲಿ, ಆದ್ರೆ ಯಾವ ಹೋರಾಟದ ಕೆಲಸಕ್ಕೆ ಕೊಟ್ಟ ಅಂತ ಹೇಳಲಿ ಎಂದು ಜಮೀರ್ ಅಹ್ಮದ್ ಗೆ ಪ್ರಶ್ನೆ ಮಾಡಿದರು.
ಹಿಂದೂ ದೇವಾಲಯ ರಕ್ಷಣೆ ಮಾಡಿದ್ರು ಅಂತಾರೆ. ಯಾರಿಂದ ರಕ್ಷಣೆ ಆಯಿತು? ನಾಟಕವಾಡಲು ಒಂದು ಇತಿ-ಮಿತಿ ಇರಬೇಕು. ಜಮೀರ್ ನಾಟಕ ಎಂಬುದು ಮಾಧ್ಯಮಗಳಿಗೂ ಗೊತ್ತು, ನಂಗೂ ಗೊತ್ತು, ಎಲ್ಲಾ ಜನ್ರಿಗೂ ಗೊತ್ತಿದೆ ಎಂದು ಕಿಡಿಕಾರಿದರು.