ಧಾರವಾಡ: ಕೆಲ ವಿಷಯಗಳಲ್ಲಿ ಮಾತ್ರ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ, ವಿಷಯಾಧರಿವಾಗಿ ಜೆಡಿಎಸ್ ಜೊತೆ ಬಿಜೆಪಿ ಸೇರಿತ್ತು. ವಿಧಾನ ಪರಿಷತ್ ನಲ್ಲಿ ಸಭಾಪತಿಗಳು ಪಕ್ಷಪಾತ ಮಾಡುತ್ತಾರೆಂಬ ಆರೋಪ ಇತ್ತು, ಹೀಗಾಗಿ ಅವರ ವಿರುದ್ಧ ಜೆಡಿಎಸ್- ಬಿಜೆಪಿ ಸೇರಿ ಅವಿಶ್ವಾಸ ನಿರ್ಣಯ ತಂದಿದ್ದೇವೆ. ಆ ವಿಷಯದಲ್ಲಿ ಮಾತ್ರ ಬಿಜೆಪಿ-ಜೆಡಿಎಸ್ ಒಂದಾಗಿತ್ತು. ಇನ್ನುಳಿದಂತೆ ಯಾವ ವಿಷಯವೂ ಜೆಡಿಎಸ್ ಜೊತೆ ಮಾತುಕತೆಯಾಗಿಲ್ಲ ಎಂದರು.
ಕಾಂಗ್ರೆಸ್ ವಿಶ್ವಾಸಕ್ಕೆ ಅರ್ಹವಲ್ಲ ಎಂದು ಅರಿತ ಜೆಡಿಎಸ್ ಗೆ ನಮ್ಮ ಮೇಲೆ ಪ್ರೀತಿ ಹೆಚ್ಚಾಗಿದೆ. ಹಿಂದೆ ಜೆಡಿಎಸ್ ಜೊತೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯದ ಪ್ರಶ್ನಾತೀತ ನಾಯಕ. ಅವರು ಅವಧಿ ಮುಗಿಯವರೆಗೂ ಸಿಎಂ ಆಗಿ ಇರ್ತಾರೆ ಎಂದು ಹೇಳಿದರು.