ಭುವನೇಶ್ವರ: ಒಡಿಶಾದ ರಾಯಗಡ ಪೊಲೀಸರು ದರೋಡೆ ಪ್ರಕರಣವನ್ನು ಭೇದಿಸಿದ್ದು, ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಬಂಧಿತರಿಂದ 24 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಅನಿಲ್ ಕುಮಾರ್ ಗರಾಡಿಯಾ (32), ಆತನ ಸಹೋದರ ಬಿಬೆಕ್ ಗರಾಡಿಯಾ (22), ಸುಧಾಂಶು ಮಿಶಾಲ್ (20) ಮತ್ತು ಬಾಪಿ ಮಿಶಾಲ್ ಎಂದು ಗುರುತಿಸಲಾಗಿದೆ. ಹಣಕಾಸು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಅನಿಲ್ ತನ್ನ ಮೂವರು ಸಹಚರರೊಂದಿಗೆ ಸೇರಿ ಸುಮಾರು 24 ಲಕ್ಷ ರೂಪಾಯಿಯನ್ನು ದರೋಡೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅನಿಲ್ ಹಣಕಾಸು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈತನೇ ತನ್ನ ಸಹೋದರ ಬಿಬೆಕ್ ಮತ್ತು ಇಬ್ಬರು ಗೆಳೆಯರಾದ ಬಾಪಿ ಮತ್ತು ಸುಧಾಂಶು ಜೊತೆ ಸೇರಿಕೊಂಡು ಹಣವನ್ನು ದರೋಡೆ ಮಾಡಿದ್ದನು. ಆದರೆ ದರೋಡೆಕೋರರು ಬಂದು ಹಣ ದೋಚಿ ಹೋದರು ಎಂದು ನಾಟಕವಾಡಿದ್ದನು. ಆಗಸ್ಟ್ 10 ರಂದು ದರೋಡೆಯ ಬಗ್ಗೆ ಮಾಹಿತಿ ಪಡೆದ ರಾಯಗಡ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.
ತನಿಖೆಯ ವೇಳೆ ಆರೋಪಿ ಅನಿಲ್ ದರೋಡೆ ಪ್ಲಾನ್ ಮಾಡಿದ್ದನು ಎಂಬುದು ತಿಳಿದು ಬಂದಿದೆ. ಕೊನೆಗೆ ಪೊಲೀಸ್ ತಂಡವು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 24 ಲಕ್ಷ ರೂಪಾಯಿಯನ್ನು ಮತ್ತು ಅಪರಾಧಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.