ಬೆಂಗಳೂರು: ಇತ್ತೀಚೆಗಷ್ಟೇ ಪತಿ ವಿರುದ್ಧ ದರ್ಶನ್ ನೀಡಿದ್ದ ಹೇಳಿಕೆಯಿಂದ ಬೇಸರಗೊಂಡಿದ್ದ ನಟಿ ರಕ್ಷಿತಾ ಪ್ರೇಮ್ ಇದೀಗ ದಾಸನ ಜೊತೆ ಫೋಟೋ ತೆಗೆಸಿಕೊಂಡು ಮುನಿಸು ಮರೆತಿದ್ದೇವೆ ಎಂದು ಹೇಳಿದ್ದಾರೆ.
ಹೌದು. ಈ ಸಂಬಂಧ ಇನ್ ಸ್ಟಾದಲ್ಲಿ ಫೋಟೋ ಹಾಕಿಕೊಂಡಿರುವ ರಕ್ಷಿತಾ, ಕೆಲವೊಂದು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದರ್ಶನ್ ಜೊತೆಗಿದ್ದ ಮುನಿಸು ಇದೀಗ ಶಮನವಾಗಿದೆ ಅಂತಾನೇ ಹೇಳಬಹುದು.
ರಕ್ಷಿತಾ ಬರೆದುಕೊಂಡಿದ್ದೇನು..?
ಕೆಲವೊಂದು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ. ನೀನು ಯಾವಾಗಲೂ ನನ್ನ ಜೊತೆಗೆ ಇರುತ್ತೀಯಾ ಎಂದು ನನಗೆ ಗೊತ್ತಿದೆ. ನಿನ್ನಂತ ಒಳ್ಳೆಯ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಪಡೆದಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ದರ್ಶನ್ ಗೆ ಟ್ಯಾಗ್ ಮಾಡಿದ್ದಾರೆ.
View this post on Instagram
ಮುನಿಸು ಇದ್ದಿದ್ದೇಕೆ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕರನ್ನು ಪುಡಂಗಿಗಳು ಎಂಬ ಹೇಳಿಕೆಯೊಂದನ್ನು ನೀಡಿದ್ದರು. ಈ ವಿಚಾರ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಅವರಿಗೆ ನೋವುಂಟು ಮಾಡಿತ್ತು. ದರ್ಶನ್ ಈ ರೀತಿ ಹೇಳಿಕೆ ನೀಡದ ಬೆನ್ನಲ್ಲೇ ಪ್ರೇಮ್ ಸುದೀರ್ಘವಾಗಿ ಪತ್ರ ಬರೆಯುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಪತಿ ಪೋಸ್ಟ್ ಹಾಕುತ್ತಿದ್ದಂತೆಯೇ ರಕ್ಷಿತಾ ಕೂಡ ದರ್ಶನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ರಕ್ಷಿತಾ, ಚಿತ್ರರಂಗದಲ್ಲಿ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ. ಇಲ್ಲಿ ಎಲ್ಲರನ್ನೂ ಪ್ರೀತಿಸುತ್ತೇವೆ ಹಾಗೆಯೇ ಎಲ್ಲರಿಗೂ ಗೌರವವನ್ನು ನೀಡುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: ನಿರ್ದೇಶಕರು ಪುಡಂಗಿಗಳು ಎಂಬ ದರ್ಶನ್ ಮಾತಿನಿಂದ ನನಗೆ ನೋವಾಗಿದೆ: ಪ್ರೇಮ್
ಕನ್ನಡ ಚಿತ್ರರಂಗ ನಮ್ಮದು, ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ. ಎಲ್ಲರೂ ಸಮಾನರು. ಆದರೆ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ. ಇಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆಯೇ ಎಲ್ಲರಿಗೂ ಗೌರ ಕೊಡುತ್ತೇವೆ. ಆದರೆ ಇಂತಹ ಘಟನೆಗಳು ನಡೆದಾಗ ಬೇಸರವಾಗುತ್ತದೆ. ಇಲ್ಲಿ ದುರದೃಷ್ಟಕರ ಕೆಲವೊಂದು ವಿಚಾರಗಳು ತೆರೆದುಕೊಳ್ಳುತ್ತಿರುವುದು ಮನಸ್ಸಿಗೆ ಬೇಸರವನ್ನು ಉಂಟುಮಾಡುತ್ತಿದೆ ಅಂತ ರಕ್ಷಿತಾ ಬರೆದುಕೊಂಡಿದ್ದರು.