ಬೆಂಗಳೂರು: ಇತ್ತೀಚಿಗೆ ಪೊಲೀಸರನ್ನು ಅತೀ ಭೀಕರವಾಗಿ ಹತ್ಯೆ ಮಾಡಿದ್ದ ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ವಿಕಾಸ್ ದುಬೇ, ಮಾಡಿದ ಪಾಪ ತೊಳೆದುಕೊಳ್ಳಲು ತೀರ್ಥಯಾತ್ರೆ ಹೋಗಿದ್ದ. ಉಜ್ಜೈನಿನ ಮಹಾಂಕಾಳಿ ದೇಗುಲದಲ್ಲಿ ದರ್ಶನ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ. ಬೆಂಗಳೂರು ಗಲಭೆಯಲ್ಲಿ ಪಾಲ್ಗೊಂಡು ಸಿಕ್ಕ ಸಿಕ್ಕಿದ್ದಕ್ಕೆ ಬೆಂಕಿ ಹಚ್ಚಿದ್ದ ಪುಂಡರು ಇದೀಗ ರಾಜಧಾನಿಯಿಂದ ಎಸ್ಕೇಪ್ ಆಗಿದ್ದು, ದರ್ಗಾಗಳನ್ನು ಸುತ್ತುತ್ತಿದ್ದಾರೆ ಎನ್ನಲಾಗಿದೆ.
ಗಲಭೆ ನಡೆದ ರಾತ್ರಿಯೇ ಊರು ಬಿಟ್ಟಿದ್ದ 50ಕ್ಕೂ ಹೆಚ್ಚು ಗಲಭೆಕೋರರು ಚಿಂತಾಮಣಿ ಸಮೀಪದ ಮುರುಗಮಲ್ಲದಲ್ಲಿರುವ ದರ್ಗಾಕ್ಕೆ ಹೋಗಿದ್ರು ಅನ್ನೋದನ್ನು ತಾಂತ್ರಿಕ ಅಂಶಗಳ ಮೂಲಕ ಪತ್ತೆ ಹಚ್ಚಲಾಗಿದೆ. ಪೊಲೀಸರು ಹಾರಿಸಿದ ಗುಂಡುಗಳಿಗೂ ಗಾಯಗೊಂಡವರ ಸಂಖ್ಯೆಗೂ ಮ್ಯಾಚ್ ಆಗ್ತಿಲ್ಲ. ಸುಮಾರು 15ಕ್ಕೂ ಹೆಚ್ಚು ಮಂದಿಗೆ ಗುಂಡು ತಾಕಿರೋ ಸಾಧ್ಯತೆಗಳಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರೋ ಅನುಮಾನ ವ್ಯಕ್ತವಾಗಿರೋದ್ರಿಂದ ಪೊಲೀಸರು ಆಸ್ಪತ್ರೆಗಳನ್ನು ಶೋಧಿಸುತ್ತಿದ್ದಾರೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಸದ್ಯ ಯುವಕರೇ ಕಾಣುತ್ತಿಲ್ಲ. ಗಲಾಟೆ ನಡೆದ ರಾತ್ರಿಯೇ ಮನೆ ಬಿಟ್ಟು ಶೇಕಡಾ 80 ರಷ್ಟು ಹುಡುಗರು ಹೋಗಿದ್ದಾರೆ. ಇತರೆ ಜಿಲ್ಲೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ಉಳಿದುಕೊಂಡಿರುವ ಸಾಧ್ಯತೆ ಇದೆ. ಕೇವಲ 20ರಷ್ಟು ಯುವಕರು ಮಾತ್ರ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದಿದ್ದಾರೆ.