ಚಾಮರಾಜನಗರ: ಆರಂಭದಲ್ಲಿ ನನಗೆ ಅರಣ್ಯ ಖಾತೆ ಕೊಟ್ಟಿದ್ದರು. ಆದರೆ ಕಾಡುಪ್ರಾಣಿಗಳ ಜೊತೆ ಇರೋದು ಬೇಡ, ರೈತರೊಂದಿಗೆ ಇರಬೇಕೆಂದು ಕೃಷಿ ಖಾತೆ ಪಡದೆ. ಆದರೆ ಕೃಷಿ ಖಾತೆಯಲ್ಲಿ ಜೈಕಾರಕ್ಕಿಂತ ಧಿಕ್ಕಾರವೇ ಜಾಸ್ತಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡುಪ್ರಾಣಿಗಳ ಜೊತೆ ಇರೋದು ಬೇಡ, ರೈತರೊಂದಿಗೆ ಇರಬೇಕೆಂದು ಅರಣ್ಯ ಖಾತೆ ಬಿಟ್ಟು ಕೃಷಿ ಖಾತೆ ಪಡದೆ. ಆದರೆ ಕೃಷಿ ಖಾತೆಯಲ್ಲಿ ಜೈಕಾರಕ್ಕಿಂತ ಧಿಕ್ಕಾರವೇ ಜಾಸ್ತಿ. ನಾನು ಪೊಲೀಸ್ ಇಲಾಖೆಯಲ್ಲಿದ್ದಾಗ ಧಿಕ್ಕಾರದ ಘೋಷಣೆ ಕೇಳಿ, ಕೇಳಿ ಜಡ್ಡುಗಟ್ಟಿ ಹೋಗಿದೆ. ಹೀಗಾಗಿ ನನಗೆ ಇದೇನು ಹೊಸದಲ್ಲ ಎಂದರು.
ರೈತರು ಯಾವಾಗಲು ಸಂಕಷ್ಟದಲ್ಲಿರುತ್ತಾರೆ. ಅವರಿಗೆ ಕೇವಲ ಪ್ಯಾಕೇಜ್ ಕೊಟ್ಟರೆ ಉದ್ಧಾರವಾಗಲ್ಲ. ಅವರ ಕಷ್ಟ, ಸಮಸ್ಯೆಗಳನ್ನು ನೇರವಾಗಿ ಅರಿತು ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಬೇಕು. ಹಾಗಾಗಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ರೂಪಿಸಿದ್ದೇನೆ. ಇದು ಪ್ರಚಾರಕ್ಕಾಗಿ ಮಾಡಿರುವ ಕಾರ್ಯಕ್ರಮವಲ್ಲ, ನನಗೆ ಪ್ರಚಾರ ಬೇಕಿಲ್ಲ ಎಂದು ಅವರು ಹೇಳಿದರು.
ರೈತರ ಮನೆಬಾಗಿಲಿಗೆ ಸರ್ಕಾರ ಹೋಗಬೇಕೆಂಬುದು ನನ್ನ ಉದ್ದೇಶವಾಗಿದೆ, ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇಸ್ರೇಲ್ ಮಾದರಿಗಿಂತ ಸಮಗ್ರ ಕೃಷಿ ಮಾಡುವ ಕೋಲಾರ ರೈತರ ಮಾದರಿ ಅಳವಡಿಸಿಕೊಳ್ಳಬೇಕು. ಬೆಳೆಗಳನ್ನು ಸಂಸ್ಕರಿಸಿ ರೈತರೇ ಬೆಲೆ ನಿಗದಿಪಡಿಸುವಂತಾಗಬೇಕು ಎಂದು ಕರೆ ನೀಡಿದರು.