ನವದೆಹಲಿ: ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವೇಳೆ 64 ವರ್ಷದ ರೈತನೊಬ್ಬ ಟ್ರಾಲಿಯೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಗುರುವಾರ ರಾತ್ರಿ ಟಿಕ್ರಿ ಗಡಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಹರಿಯಾಣದ ಭಾನಾ ಗ್ರಾಮದ ರಾಜ್ಕುಮಾರ್ ಎಂದು ಗುರುತಿಸಲಾಗಿದೆ. ಪ್ರತಿಭಟನಾ ಸ್ಥಳದಲ್ಲಿದ್ದ ಟ್ರಾಲಿವೊಂದರಲ್ಲಿ ರಾಜ್ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆತನನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ ಎಂದು ರೋಹ್ಟಕ್ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ(ಪಿಜಿಐಎಂಎಸ್) ತಿಳಿಸಿದೆ ಎಂದು ಪೊಲೀಸ್ ಅಧಿಕಾರಿ ಬಹದ್ದೂರ್ ಗರ್ ಹೇಳಿದ್ದಾರೆ.
ಕುಮಾರ್, ಟಿಕ್ರಿ ಗಡಿಯಲ್ಲಿ ಸುಮಾರು 20 ಕ್ಕಿಂತ ಹೆಚ್ಚು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದು, ಅವರು ತಮ್ಮ ಹಳ್ಳಿಯ ಐದು ರೈತರೊಂದಿಗೆ ಪ್ರತಿಭಟನೆಗೆ ಬಂದಿದ್ದರು. ಇದೀಗ ಶವವನ್ನು ರೈತರು ಆತನ ಮನೆಗೆ ಹಿಂದಿರುಗಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ 37 ದಿನಗಳಲ್ಲಿ 42ಕ್ಕೂ ಹೆಚ್ಚು ಜನ ರೈತರು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಲವರು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿದ್ದರೆ ಮತ್ತೆ ಕೆಲವರು ರಸ್ತೆ ಅಪಘಾತಗಳಿಂದ ಮೃತಪಟ್ಟಿರುವುದಾಗಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ತಿಳಿಸಿದೆ.