– ಸಾವಿರಾರು ರೈತರು ಮುಂಬೈನತ್ತ ಹೆಜ್ಜೆ
ಮುಂಬೈ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಮಹಾರಾಷ್ಟ್ರದ ರೈತರು ಪಾದಯಾತ್ರೆ ಆರಂಭಿಸಿದ್ದು, ಸೋಮವಾರ ಮುಂಬೈನಲ್ಲಿ ಸೇರಲಿದ್ದಾರೆ. ದೆಹಲಿಯ ಗಡಿಯ ಚಳಿಯಲ್ಲಿ ಕುಳಿತಿರುವ ದಿಟ್ಟ ರೈತರು ಸರ್ಕಾರ ಕಾನೂನುಗಳನ್ನ ಹಿಂಪಡೆದುಕೊಳ್ಳುವರೆಗೂ ಸ್ಥಳದಿಂದ ಕದಲಲ್ಲ ಎಂದು ಸ್ಪಷ್ಟ ನಿಲುವಿನೊಂದಿಗೆ ಕುಳಿತಿದ್ದಾರೆ. ದೆಹಲಿಯಲ್ಲಿರುವ ರೈತರ ಪ್ರತಿಭಟನೆಗೆ ಮಹಾರಾಷ್ಟ್ರ ಅನ್ನದಾತರು ಸಾಥ್ ನೀಡಿದ್ದಾರೆ.
ಮಹಾರಾಷ್ಟ್ರದ 21 ಜಿಲ್ಲೆಗಳಿಂದ ಹೊರಟಿರುವ ರೈತರು ನಾಸಿಕ್ ಬಳಿ ಒಂದೆಡೆ ಸೇರಿದ್ದಾರೆ. ನಾಸಿಕ್ ನಿಂದ 180 ಕಿಲೋ ಮೀಟರ್ ಪಾದಯಾತ್ರೆ ನಡೆಸಿ ಇಂದು ಸಂಜೆ ವೇಳೆ ಮುಂಬೈನ ಆಝಾದ್ ಮೈದಾನದಲ್ಲಿ ಸೇರಲಿದ್ದಾರೆ. ಸೋಮವಾರ ನಡೆಯುವ ರೈತರ ಸಮಾವೇಶದಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾಗಿಯಾಗಲಿದ್ದಾರೆ.
ಕೆಲ ದಿನಗಳ ಹಿಂದೆ ಸರ್ಕಾರದ ನೂತನ ಕಾಯ್ದೆ ಬಗ್ಗೆ ಮಾತನಾಡಿದ್ದ ಶರದ್ ಪವಾರ್, ಕೇಂದ್ರ ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ದೆಹಲಿ ಚಳಿಯನ್ನ ಲೆಕ್ಕಿಸದೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ತಾಳ್ಮೆಯನ್ನ ಪರೀಕ್ಷಿಸುವ ದುಸ್ಸಾಹಸಕ್ಕೆ ಸರ್ಕಾರ ಮುಂದಾಗಬಾರದು ಎಂದು ಎಚ್ಚರಿಕೆ ನೀಡಿದ್ದರು.