ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಅವರು ಹೆಚ್ಡಿಕೆ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗ್ರಾ.ಪಂ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಅವರು, ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್ಡಿಕೆ ಸೇರಿ ಸೋಲಿಸಿದ್ದರು. ಅದಕ್ಕಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಸರ್ಕಾರ ತೆಗೆದೆ ಎಂದಿದ್ದಾರೆ.
ಅಂದು ಜೋಡೆತ್ತು, ಇವತ್ತು ಕಿತ್ತಾಡ್ತಿದ್ದಾರೆ. ಅಧಿಕಾರ ಹೋಗ್ತಿದ್ದಂತೆ ಶಿವಕುಮಾರ್ ತಿಹಾರ್ ಜೈಲಿಗೆ ಹೋದ. ಕರ್ನಾಟಕದಿಂದ ಅಲ್ಲಿಗೆ ಹೋದವನು ಶಿವಕುಮಾರ್ ಒಬ್ಬನೇ, ಆದರೆ ಈಗ ಕೆಪಿಸಿಸಿ ಅಧ್ಯಕ್ಷ. ಅವನ ತಮ್ಮ ಸುರೇಸ್ ನನ್ನನ್ನ ಯಾರು ಅಂತಿದ್ದ. ಈಗ ಚನ್ನಪಟ್ಟಣದವರ ಶಕ್ತಿ ಅಣ್ಣ-ತಮ್ಮನಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರ ಮನೆಯವರಿಗೂ ನಾನು ಏನೆಂದು ಗೊತ್ತಾಗಿದೆ. ನಾನು ಎಂಎಲ್ಸಿಗೆ ರಾಜೀನಾಮೆ ಕೊಡ್ತೇನೆ, ಕುಮಾರಸ್ವಾಮಿ ಚನ್ನಪಟ್ಟಣದ 10 ಊರಿನ ಹೆಸರು ಹೇಳಲಿ ಎಂದು ಯೋಗೇಶ್ವರ್ ಕಿಡಿಕಾರಿದ್ದಾರೆ.