ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಜೊತೆ ಬಂದಿದ್ರೆ ಸಿಎಂ ಆಗುತ್ತಿರಲಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ನಾನು ಬಿಜೆಪಿ ಸೇರಿದ್ರೆ 5 ವರ್ಷ ಸಿಎಂ ಆಗುತ್ತಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅಶ್ವಥ್ ನಾರಾಯಣ್, ರೈತ ನಾಯಕ ಯಡಿಯೂರಪ್ಪ ಇರಬೇಕಾದರೆ ನಾವೇಕೆ ಸಿಎಂ ಸ್ಥಾನ ಬಿಟ್ಟು ಕೊಡುತ್ತಿದ್ದೇವು. ನಮ್ಮ ಯಡಿಯೂರಪ್ಪ ಅವರೇ ಸಿಎಂ ಆಗುತ್ತಿದ್ದರು. ಎಲ್ಲೂ ಬಿಜೆಪಿ ಅವರು ಸಿಎಂ ಸ್ಥಾನ ಬಿಟ್ಟು ಕೊಟ್ಟ ಇತಿಹಾಸ ಇಲ್ಲ ಎಂದರು.
ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಅವರು ಸಮಸ್ಯೆ ಮಾಡಿರುವುದು ಈಗ ಅರಿವಾಗಿದೆ. ಕಾಂಗ್ರೆಸ್ ವಿರೋಧಿ ಮತಗಳೇ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಗೆಲ್ಲಲು ನೆರವಾಗಿದ್ದವು. ಅದನ್ನು ಅವತ್ತು ಕುಮಾರಸ್ವಾಮಿ ಮರೆತು ಕಾಂಗ್ರೆಸ್ ಜೊತೆ ಕೈ ಜೋಡಿಸಿದರು. ಇದನ್ನು ಅವತ್ತೇ ಕುಮಾರಸ್ವಾಮಿಯವರು ನಿರ್ಧಾರ ಮಾಡಬೇಕಿತ್ತು. ಆದರೆ ಈಗ ಅವರಿಗೆ ಮನವರಿಕೆ ಆಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ವಿರುದ್ಧವಾಗಿಯೇ ಜೆಡಿಎಸ್ ನಿರ್ಮಾಣವಾಗಿದ್ದು, ಆದರೆ ಅದನ್ನು ಕುಮಾರಸ್ವಾಮಿ ಅವರು ಮರೆತಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ನೋವನ್ನು ಅನುಭವಿಸಿದ್ದಾರೆ. ಅದನ್ನು ಈಗ ಮೆಲಕು ಹಾಕುತ್ತಿದ್ದಾರೆ. ಯಾವ ರೀತಿ ಕಿರುಕುಳ ಕೊಟ್ಟರು, ಕಾಲೆಳೆದರು ಎಂದು ಹೇಳಿಕೊಳ್ಳುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ನಮ್ಮ ಪಕ್ಷಕ್ಕೆ ಬಂದ ಶಾಸಕರಿಗೂ ಕಿರುಕುಳ ಇತ್ತು. ಕುಮಾರಸ್ವಾಮಿ ಅವರಿಗೂ ಕಿರುಕುಳ ಇತ್ತು ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.