ಬೆಂಗಳೂರು: ಉಪಸಭಾಪತಿ ಎಸ್. ಎಸ್ ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ನೋವಿನಲ್ಲಿದ್ದಾರೆ. ಹಾಗಾಗಿ ಏನೋ ಮಾತಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪರಿಷತ್ತು ಗಲಾಟೆಯಿಂದ ಧರ್ಮೇಗೌಡರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ ಅನ್ನೋ ಕುಮಾರ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ನೋವಿನಲ್ಲಿದ್ದಾರೆ. ಹಾಗಾಗಿ ಏನೋ ಮಾತಾಡಿದ್ದಾರೆ. ಅವರ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ ಎಂದರು.
ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಡೆತ್ ನೋಟ್ ಸಾರಾಂಶ ಇನ್ನೂ ನಂಗೆ ಗೊತ್ತಾಗಿಲ್ಲ. ಯಾವ ಕಾರಣಕ್ಕಾಗಿ ಧೈರ್ಯ ಕಳ್ಕೊಂಡ್ರು ಅಂತ ಗೊತ್ತಿಲ್ಲ. ಅವರ ವೈಯಕ್ತಿಕ ವಿಚಾರನೋ ಅಥವಾ ರಾಜಕೀಯನೋ ಗೊತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಸಾಗರ ಬಳಿಯ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ, ಹಣಕಾಸು ವಿಚಾರ ಸಂಬಂಧ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಅರ್ಧಕ್ಕೆ ನಿಲ್ಲಿಸಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದಾರೆ.