– ಸಿಎಂ ಪುತ್ರ ವಿಜಯೇಂದ್ರರರೇ ‘ಆ’ ಮಹಾನಾಯಕ
ತುಮಕೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರನ್ನ ಎಸ್ಐಟಿಯವರು ವಿಚಾರಣೆ ಮಾಡಬೇಕು ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಅಲ್ಲಿ ಇಲ್ಲಿ ಹುಡುಕಾಡುವ ಬದಲಾಗಿ ಕುಮಾರಸ್ವಾಮಿಯವರೇ ಹೇಳಿದ್ದಾರಲ್ಲ, ನನಗೆ ಐದು ಕೋಟಿ ಡೀಲ್ ಮಾಡಿರೋದು ಗೊತ್ತಿದೆ ಅಂತ. ಆ ಮಹಾನಾಯಕ ಯಾರೆಂದು ಗೊತ್ತಿದೆ ಅಂತ ಅವರೇ ಹೇಳಿದ್ಮೇಲೆ ಎಸ್ ಐಟಿಯವರು ಕುಮಾರಸ್ವಾಮಿ ಹೇಳಿಕೆ ತಗೆದುಕೊಳ್ಳಬೇಕು. ತನಿಖೆಗೆ ಸಹಕಾರ ಕೊಟ್ರು ಅನ್ನುವ ಕೀರ್ತಿ ಕುಮಾರಸ್ವಾಮಿಗೆ ಸಿಗುತ್ತೆ. ಕುಮಾರಸ್ವಾಮಿಯವರ ಅಧಿಕೃತ ಹೇಳಿಕೆ ಪಡೀಬೇಕು. ಅವರ ಹೇಳಿಕೆ ಪಡೆದ್ರೆ ತನಿಖೆ ಬೇಗ ಮುಗಿಸಲು ಸಹಕಾರವಾಗುತ್ತದೆ ಎಂದರು.
ಸಿಎಂ ಪುತ್ರ ವಿಜಯೇಂದ್ರರರೇ ಆ ಮಹಾನಾಯಕ. ರಾಜ್ಯದಲ್ಲಿ ಸಿಎಂ ಹೊರತುಪಡಿಸಿದರೆ ಮಹಾನಾಯಕ ಯಾರು..? ಸಿಎಂ ಪುತ್ರ ವಿಜಯೇಂದ್ರರೇ ಆ ಮಹಾನಾಯಕ ಇರಬಹುದು. ಸತ್ಯ ಹೊರಗೆ ಬಾರದೇ ನಾವು ಆರೋಪ ಮಾಡಿ ಚಾರಿತ್ಯ ವಧೆ ಮಾಡಬಾರದು. ಎಲ್ಲರೂ ವಿಜಯೇಂದ್ರರ ಮೇಲೆ ಊಹೆ ಮಾಡುತ್ತಾರೆ. ಕಾಂಗ್ರೆಸ್ಸಿನಿಂದ ಬಂದವರು ಪುನಃ ಕಾಂಗ್ರೆಸ್ಸಿಗೆ ಹೋಗಬಹುದು ಎಂದು ಬ್ಲಾಕ್ ಮೇಲ್ ಮಾಡಲು ಹೀಗೆ ಮಾಡಿರಬಹುದು. ತನಿಖೆಯಾಗಲಿ ಸತ್ಯ ಹೊರಗೆ ಬರಲಿ ಎಂದು ಆಗ್ರಹಿಸಿದರು.
ಸಿಡಿ ಅಪ್ ಲೋಡ್ ಆಗುವ ಎರಡು ದಿನ ಮುಂಚೆ ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವಿಸ್ ಅವರು ಜಾರಕಿಹೊಳಿಗೆ ಫೋನ್ ಮಾಡಿ ತಿಳಿಸಿದ್ರು. ನಾಳೆ ನಾಡಿದ್ದು ಸಿಡಿ ಅಪ್ಲೋಡ್ ಆಗುತ್ತೆ ಅಂತ ಫೋನ್ ಮಾಡಿ ತಿಳಿಸಿದ್ದಾರೆ. ಹಿಂಗೆಲ್ಲಾ ಸಿಡಿ ಅಪ್ಲೋಡ್ ಮಾಡ್ತಾರೆ ಬೇಜಾರ್ ಮಾಡ್ಕೋಬೇಡ ನಿಮ್ಮ ಜೊತೆ ನಾವೆಲ್ಲಾ ಇರ್ತಿವಿ ಬೇಜಾರ್ ಮಾಡ್ಕೋಬೇಡ ಅಂತ ಫಡ್ನವೀಸ್ ಹೇಳಿದ್ದಾರೆ. ನನಗೆ ಒಂದು ಆಶ್ಚರ್ಯ ಅಂದ್ರೆ ಮಹಾರಾಷ್ಟ್ರದ ಸಿಎಂಗೆ ಮಾಹಿತಿ ಇರುತ್ತೆ. ನಮ್ಮಲ್ಲಿರುವ ಇಂಟೆಲಿಜೆನ್ಸ್ ಕತ್ತೆ ಕಾಯ್ತಾರಾ? ಎಂದು ರಾಜಣ್ಣ ಕಿಡಿಕಾರಿದರು.