ಚಿಕ್ಕಬಳ್ಳಾಪುರ: ಕುತ್ತಿಗೆ ಕೊಯ್ದು ಹಾಗೂ ಚಾಕುವಿನಿಂದ ಇರಿದು ಪ್ರಾವಿಜನ್ ಸ್ಟೋರ್ ಮಾಲೀಕನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಐಬಸಾಪುರ ಗ್ರಾಮದ ನಿರಂಜನಮೂರ್ತಿ (48) ಕೊಲೆಯಾದ ವ್ಯಕ್ತಿ. ಜಂಗಮಕೋಟೆ ಕ್ರಾಸ್ ನಲ್ಲಿ ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದ ನಿರಂಜನಮೂರ್ತಿ ಪ್ರತಿ ದಿನ ಐಬಸಾಪುರ ಗ್ರಾಮದಿಂದ ಜಂಗಮಕೋಟೆ ಕ್ರಾಸ್ಗೆ ಹೋಗಿ ಬರುತ್ತಿದ್ದ.
ಪ್ರತಿದಿನ ಸಂಜೆ 07 ಗಂಟೆಗೆ ವೇಳೆಗೆ ಮನೆಗೆ ಬರುತ್ತಿದ್ದ ನಿರಂಜನಮೂರ್ತಿ ನಿನ್ನೆ ರಾತ್ರಿ ಮನೆಗೆ ಬಂದಿಲ್ಲ. ಮನೆಯವರು ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅನುಮಾನಗೊಂಡ ಅವರು ಬೆಳಗ್ಗೆ ಹುಡುಕಾಟ ಆರಂಭಿಸಿದ್ದರು, ಈ ವೇಳೆ ನಿರಂಜನಮೂರ್ತಿ ಬೈಕ್ ಪೆಟ್ರೋಲ್ ಬಂಕ್ ಬಳಿಯ ಚರ್ಚ್ ಬಳಿ ಪತ್ತೆಯಾಗಿತ್ತು.
ಕೂಡಲೇ ಅನುಮಾನಗೊಂಡು ಸುತ್ತ ಸುತ್ತಲೂ ನಿರ್ಜನ ಪ್ರದೇಶಗಳಲ್ಲಿ ಹುಡುಕಾಡಿದಾಗ ಜಂಗಮಕೋಟೆ ಹೊಸಕೋಟೆ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಹಣಕ್ಕಾಗಿ ಅಥವಾ ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರಬಹುದಾ ಎಂಬ ಸಂಶಯ ಮೂಡಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.