ಹಾಸನ: ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಲಾಂಗು, ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಹಾಸನದ ರಿಂಗ್ ರಸ್ತೆಯಲ್ಲಿ ನಡೆದಿದೆ. ಡೈರಿಯಿಂದ ಉದ್ದೂರು ಮೂಲಕ ಬೇಲೂರಿಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಯಲ್ಲಿ ನಾಲ್ಕರು ಯುವಕರು ಗಾಂಜಾ ಸೇವಿಸಿ, ಮದ್ಯಪಾನ ಮಾಡಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಕುಡಿದ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ಕ್ಲುಲಕ ಕಾರಣಕ್ಕೆ ಜಗಳ ಶುರುವಾಗಿದ್ದು, ಪರಸ್ಪರ ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಾಸನದ ದ್ಯಾವಪ್ಪನ ಕೊಪ್ಪಲಿನ ತೇಜಸ್(23) ಎಂಬ ಯುವಕನ ಕೈ, ಕಣ್ಣುಗಳ ಭಾಗಕ್ಕೆ ಗಾಯಗಳಾಗಿವೆ. ಇದನ್ನೂ ಓದಿ:ಮನೆಯ ಸಮೀಪದ ಟ್ಯಾಂಕ್ನಿಂದ ನೀರು ಕುಡಿದ ಕಾಡಾನೆಗಳು
ಘಟನೆಯ ಬಳಿಕ ರಾಜೇನಹಳ್ಳಿ ಗ್ರಾಮದ ಪುಟ್ಟ ಹಾಗೂ ಸ್ನೇಹಿತರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಂದು ಲಾಂಗ್ ಹಾಗೂ ಒಂದು ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಹದಿನೈದು ದಿನದ ಹಿಂದೆ 80 ಅಡಿ ರಸ್ತೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪದೇ ಪದೇ ಪುಡಿ ರೌಡಿಗಳ ಹಾವಳಿಯಿಂದ ಹಾಸನ ನಗರದ ಜನತೆ ಬೆಚ್ಚಿ ಬಿದ್ದಿದ್ದು, ಪೊಲೀಸರು ಅವರ ಹೆಡೆಮುರಿ ಕಟ್ಟಬೇಕೆಂದು ಒತ್ತಾಯಿಸಿದ್ದಾರೆ.