– ರಾಜ್ಯ ರಾಜಕಾರಣದಲ್ಲಿ ರಸ ಮಂಜರಿ ಕಾರ್ಯಕ್ರಮ
– ಒಬ್ಬ ಸಚಿವ ವೈಚಾರಿಕವಾಗಿ ಶುದ್ಧವಾಗಿರಬೇಕು
ಬೆಂಗಳೂರು: ಮಾಜಿ ಮಂತ್ರಿ ಅವರದ್ದು ಎನ್ನಲಾದ ವೀಡಿಯೋ ಬಯಲಾಗ್ತಿದ್ದಂತೆ ಸಂಪುಟದ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿರೋದು ವಿಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ರಸ ಮಂಜರಿ ಕಾರ್ಯಕ್ರಮ ಆರಂಭವಾಗಿದೆ. ಪದೇ ಪದೇ ರಂಜಿಸತೊಡಗಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ.. ಇವರ ಸಿಡಿನೂ ಇದ್ಯಾ ಎಂಬ ಅನುಮಾನ ಮೂಡುತ್ತಿದೆ. ನಿಮಗೆ ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಗೋಗಿ ಅಂತಾ ಆಗ್ರಹಿಸಿದರು.
8 ತಿಂಗಳ ಹಿಂದೆ ಯತ್ನಾಳ್ ಈ ಬಗ್ಗೆ ಮಾತನಾಡುತ್ತಿದ್ದರು. ಆನಂತರ ಸಂತೋಷ್ ಆತ್ಮಹತ್ಯೆ ಪ್ರಯತ್ನ ಮಾಡಿದರು. ಆನಂತರ ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಎಲ್ಲರು ಸಿಡಿ ಸಿಡಿ ಅನ್ನತೊಡಗಿದರು. ಯತ್ನಾಳ್ ಸ್ಪಷ್ಟವಾಗಿ ಯಡಿಯೂರಪ್ಪ, ವಿಜಯೇಂದ್ರ, ಬಿಜೆಪಿ ಸಿಡಿಯಿಂದ ಮುಜುಗರಕ್ಕೆ ಒಳಗಾಗ್ತಾರೆ ಅಂತ. ನಾಳೆ ಒಂದು ಸುದ್ದಿ ರಾಜ್ಯ ಸರ್ಕಾರವನ್ನ ತಲ್ಲಣಗೊಳಿಸುತ್ತೆ ಅಂತ ಯತ್ನಾಳ್ ಹೇಳಿದರು. ಮರು ದಿನ ಸಿಡಿ ಬಂತು. ಸಚಿವರು ಹಾಗೂ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಲ್ಲಿ ಸಿಡಿ ಬಹಿರಂಗವಾಗುತ್ತೋ ಎಂಬ ಭಯ ಕಾಡ್ತಿದೆ ಅನ್ನಿಸುತ್ತೆ. ಏನು ತಪ್ಪು ಮಾಡದಿದ್ದರೆ ಕೋರ್ಟ್ ಗೆ ಹೋಗುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರು.
ಆರು ಸಚಿವರು ರಕ್ಷಣೆ ಕೊಡಿ ಅಂತ ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗದವರು ಇವರು ಜನರಿಗೆ ಇನ್ನೇನು ರಕ್ಷಣೆ ಕೊಡ್ತಾರೆ? ಇವರಿಗೆ ತಪ್ಪು ಮಾಡಿರುವ ಗಿಲ್ಟ್ ಕಾಡುತ್ತಿರಬಹುದು. ಏನೂ ತಪ್ಪು ಮಾಡದಿದ್ದರೆ ಯಾಕೆ ಹೋಗಬೇಕಿತ್ತು. ಒಬ್ಬ ಸಚಿವ ವೈಚಾರಿಕವಾಗಿ ಶುದ್ಧವಾಗಿರಬೇಕು. ಬ್ಲಾಕ್ ಮೇಲ್ ಮಾಡ್ತಿದ್ರೆ ಗಮನಕ್ಕೆ ತರಬೇಕು. ಸುಮ್ಮನೆ ಭಯವಿತ್ತು ಅಂತ ಯಾಕೆ ಹೋಗಬೇಕು. ಹರಿಶ್ಚಂದ್ರರಾಗಿದ್ದರೆ ಮಿಡಿಯಾ ಯಾಕೆ ಬಿತ್ತರಿಸುತ್ತೆ. ಅಸತ್ಯ ಇದ್ದರೆ ಕೋರ್ಟ್ ಕಟಕಟೆ ಹತ್ತಬಹುದು. ಸುಮ್ಮನೆ ಮಿಡಿಯಾ ಮೇಲೆ ಯಾಕೆ ಆರೋಪ ಮಾಡ್ತೀರಿ ಎಂದು ವಾಗ್ದಾಳಿ ನಡೆಸಿದರು.
ಸಂತ್ರಸ್ಥರೇ ದೂರು ಕೊಡಬೇಕೆಂದಿಲ್ಲ. ಅವರ ಪರವಾಗಿ ಯಾರು ಬೇಕಾದರೂ ದೂರು ಕೊಡಬಹುದು. ಅವರು ಠಾಣೆ ಮೆಟ್ಟಿಲೇರಿದಾಗ ದೂರು ದಾಖಲಿಸಬೇಕು. ಪುರಾವೆಗಳು ಇದ್ದರೆ ತಕ್ಷಣವೇ ಎಫ್ ಐಆರ್ ಮಾಡಬೇಕು. ಆದ್ರೆ ಇಲ್ಲಿ ಆಡಿಯೋ, ವೀಡಿಯೋ ಇರುವ ಸಿಡಿ ಇದೆ. ಇದೆಲ್ಲವೂ ಎಫ್ ಐಆರ್ ಹಾಕಲು ಮುಖ್ಯವಾಗಿರುತ್ತದೆ. ಇಲ್ಲಿಯವರೆಗೆ ಎಫ್ ಐಆರ್ ದಾಖಲಿಸಿಲ್ಲ. ಇವತ್ತು ಕಮೀಷನರ್ ಗೂ ಎಫ್ ಐಆರ್ ಹಾಕಲು ಸಾಧ್ಯವಾಗ್ತಿಲ್ಲ. ಇದು ಕಂಟೆಂಫ್ಟ್ ಆಫ್ ಕೋರ್ಟ್ ಆಗಲಿದೆ, ಪೊಲೀಸ್ ಆಯುಕ್ತರಿಗೂ ಇದು ಅನ್ವಯವಾಗಲಿದೆ. ಎಫ್ ಐಆರ್ ದಾಖಲಿಸದೆ ತನಿಖೆ ಮಾಡುತ್ತಿದ್ದಾರೆ. ಇನ್ನೂ ವಿಚಾರಣಾ ಹಂತದಲ್ಲೇ ಪೊಲೀಸರಿದ್ದಾರೆ. ಇಲ್ಲಿಯವರೆಗೆ ಯಾಕೆ ಎಫ್ ಐಆರ್ ದಾಖಲಿಸಿಲ್ಲ ಎಂದರು.
ಒಂದು ಹೆಜ್ಜೆ ಮುಂದೆ ಹೋದ ಮಾಜಿ ಸಚಿವ ಸಾರಾ ಮಹೇಶ್, ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್ರಿ ಅರ್ಜಿ ಹಾಕಿರೋದೇ ನಾವೆಲ್ಲಾ ತಲೆ ತಗ್ಗಿಸೋ ವಿಚಾರ. ಯಾರು ಕೋರ್ಟಿಗೆ ಹೋಗಿದ್ದಾರೋ.. ಅವರನ್ನೆಲ್ಲಾ ಸಂಪುಟದಿಂದ ವಜಾ ಮಾಡಿ ಅಂತಾ ಆಗ್ರಹಿಸಿದ್ದಾರೆ. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ವಿ ಅಂದ್ರು. ಬಾಂಬೆನಲ್ಲಿ ಏನ್ ಮಾಡ್ತಿದ್ರು ಅಂತ ಈಗ ಹೇಳಲಿ. ಅದರ ಬಗ್ಗೆ ಮಾತನಾಡೋಕು ಅಸಹ್ಯ ಆಗುತ್ತೆ ಅಂತಾ ಹೇಳಿದ್ರು. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೀತಿನಿ ಅಂದವ್ರು ಎಲ್ಲಿ ಹೋದ್ರು ಎಂದು ವಿಶ್ವನಾಥ್ರನ್ನು ಕೆಣಕಿದರು.