ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಕೊಡಗು ಎಸ್ ಪಿ.ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಡಿಕೇರಿ ತಾಲೂಕಿನ ಎಮ್ಮೇಮಾಡು ನಿವಾಸಿಗಳಾದ ಇಬ್ರಾಹಿಂ, ಅಶ್ರಫ್ ಹಾಗೂ ಮಸ್ತಾಫಾ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ ಕತ್ತಿ, ಟೇಪ್ಗಳು, ಮೊಬೈಲ್ ಫೋನ್, ಮಾರುತಿ 800 ಕಾರು, 121 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಎರಡು ತಿಂಗಳ ಹಿಂದಷ್ಟೇ ಕಳವು ಮಾಡಿದ್ದ 3 ಚೀಲ ಕಾಫಿ ಮತ್ತು 400 ಕೆ.ಜಿ ಕರಿ ಮೆಣಸು ಸೇರಿದಂತೆ ಒಟ್ಟು 12 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಆರೋಪಿಗಳು ಕೊಡಗು ಹಾಗೂ ಮೈಸೂರು ಸೇರಿದಂತೆ ಇತರೇ ಜಿಲ್ಲೆಗಳ ಶ್ರೀಮಂತರ ಮನೆಗಳ ದರೋಡೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಮೇ 5ರಂದು ವಿರಾಜಪೇಟೆ ತಾಲೂಕಿನ ಶಿವಾಸ್ ಜಂಕ್ಷನ್ ಬಳಿ ಮನೆಯೊಂದರ ಕಿಟಕಿ ಸರಳುಗಳನ್ನು ಮುರಿದು ಮನೆಯವರ ಕೈ, ಬಾಯಿ ಕಟ್ಟಿ ಹಲ್ಲೆ ನಡೆಸಿ ಸಿನಿಮೀಯಾ ರೀತಿಯಲ್ಲಿ ದರೋಡೆ ಮಾಡಲಾಗಿತ್ತು. ಘಟನೆ ಸ್ಥಳೀಯರಲ್ಲಿ ಭಯವನ್ನು ಉಂಟು ಮಾಡಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸುಮನ್ ಡಿ.ಪನ್ನೇಕರ್, ವಿರಾಜಪೇಟೆ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ನೇತೃತ್ವದಲ್ಲಿ ಅಪರಾಧ ಪತ್ತೆದಳದ ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿದ್ದರು.