ಮಂಡ್ಯ: ಕಾವೇರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಇಬ್ಬರು ಕೃಷ್ಣನ ಭಕ್ತರು ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ಜರುಗಿದೆ.
ಬೆಂಗಳೂರಿನ ನಂದಿನಿ ಲೇಔಟ್ನ ಆರ್.ಎಸ್.ದಾಸ್ (43), ಚಿತ್ರದುರ್ಗದ ಗುಣಾರನವದಾಸ್ (35) ಕಾವೇರಿ ನದಿಯಲ್ಲಿ ಕಣ್ಮರೆಯಾಗಿರುವ ಕೃಷ್ಣನ ಭಕ್ತರು. ಈ ಇಬ್ಬರು ಮೈಸೂರಿನ ಇಸ್ಕಾನ್ ದೇವಸ್ಥಾನದಲ್ಲಿ ದೀಕ್ಷೆ ಪಡೆದು ಹಲವು ವರ್ಷಗಳಿಂದ ಧಾರ್ಮಿಕ ಕೆಲಸಗಳನ್ನು ಮಾಡುತ್ತಿದ್ದರು. ನಿನ್ನೆ ಸಂಜೆಯ ವೇಳೆ ಧಾರ್ಮಿಕ ಕೆಸಲ ಮುಗಿಸಿ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಕಾವೇರಿ ನದಿಯ ತಟದಲ್ಲಿ ಇರುವ ಇಸ್ಕಾನ್ ದೇವಸ್ಥಾನದ ಫಾರಂ ಹೌಸ್ಗೆ ಇತರ ಸಹೋದ್ಯೋಗಿಗಳೊಂದಿಗೆ ಬಂದಿದ್ದಾರೆ.
ಈ ವೇಳೆ ಆಹಾರ ಸೇವನೆ ಮಾಡುವ ಮೊದಲು ಸ್ನಾನ ಮಾಡುವ ಪದ್ಧತಿ ಇವರಲ್ಲಿ ಇರುವ ಕಾರಣ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾರೆ. ಈ ವೇಳೆ ಇಬ್ಬರು ಕೃಷ್ಣ ಭಕ್ತರು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಕಣ್ಮರೆಯಾಗಿರುವ ಕೃಷ್ಣ ಭಕ್ತರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕುತ್ತಿದ್ದಾರೆ.