ಮಡಿಕೇರಿ: ಸ್ನಾನಕ್ಕೆಂದು ಕಾವೇರಿ ನದಿಗೆ ಇಳಿದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಣಿವೆ ಗ್ರಾಮದಲ್ಲಿ ನಡೆದಿದೆ.
ಹೆಬ್ಬಾಲೆ ಗ್ರಾಮದ ರಮೇಶ್ ರೆಡ್ಡಿ(56) ಕಾಣೆಯಾಗಿರುವ ದುರ್ದೈವಿ. ಹೆಬ್ಬಾಲೆ ಗ್ರಾಮದ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಎದುರು ಹರಿಯುವ ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದನ್ನು ಸ್ಥಳೀಯರು ಗಮನಿಸಿದ್ದು, ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ನಾಪತ್ತೆಯಾದ ವಿಷಯ ತಿಳಿದ ಗ್ರಾಮಸ್ಥರು ಹಾಗೂ ಈಜು ತಜ್ಞರು, ಸಂಜೆವರೆಗೂ ಮೃತದೇಹದ ಶೋಧ ಕಾರ್ಯ ನಡೆಸಿದರು. ಆದರೂ ಮೃತ ದೇಹ ಪತ್ತೆಯಾಗಿಲ್ಲ. ರಮೇಶ್ ರೆಡ್ಡಿ ಅವರಿಗೆ ಪತ್ನಿ, ಎರಡು ಹೆಣ್ಣು ಹಾಗೂ ಒಂದು ಗಂಡು ಮಗನಿದ್ದು, ಕುಟುಂಬ ದುಃಖದಲ್ಲಿ ಮುಳುಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.