ತುಮಕೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅತಿವೇಗವಾಗಿ ಹರಡುತ್ತಿದೆ. ಹೀಗಾಗಿ ತುಮಕೂರಿನಲ್ಲಿ ವರ್ತಕರು ಕೊರೊನಾ ವಿರುದ್ಧ ವಿಭಿನ್ನವಾಗಿ ಹೋರಾಟಕ್ಕಿಳಿದ್ದಿದ್ದಾರೆ. ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಜನಸಂದಣಿ ತಪ್ಪಿಸಲು ವ್ಯಾಪಾರಿಗಳು ಹೊಸ ಮಾರ್ಗ ಕಂಡು ಕೊಂಡಿದ್ದಾರೆ.
ಬೀದಿ ವ್ಯಾಪಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಕೊರೊನಾ ವಿರುದ್ಧ ಹೋರಾಟಕ್ಕೆ ಇಳಿದಿದ್ದು, ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣ ಸೇವೆಯನ್ನ ಆರಂಭಿಸಿದ್ದಾರೆ. ಈಗ ಪಟ್ಟಣದ ನಿವಾಸಿಗಳು ಹೂ, ಹಣ್ಣು, ತರಕಾರಿಗೋಸ್ಕರ ಯಾವ ಮಾರ್ಕೆಟ್ಗೂ ಹೋಗುವಾಗಿಲ್ಲ. ಹೀಗಾಗಿ ನಮಗೆ ಒಂದೇ ಒಂದು ಕಾಲ್ ಮಾಡಿದರೆ ಸಾಕು ಅವರಿಗೇನು ಬೇಕೋ ಅದನ್ನೆಲ್ಲಾ ಅವರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ ಎಂದು ರಸ್ತೆ ಬದಿ ವ್ಯಾಪಾರಿ ರಮೇಶ್ ಹೇಳಿದ್ದಾರೆ.
ಈ ಸೇವೆಯನ್ನ ತುರುವೇಕೆರೆ ಪಟ್ಟಣದಾದ್ಯಂತ ಮಾಡುತ್ತಿದ್ದು, ಸುಮಾರು 45 ರಿಂದ 50 ವ್ಯಾಪಾರಿಗಳು ತಮ್ಮ ತಮ್ಮ ನಂಬರ್ಗಳನ್ನ ಸಾರ್ವಜನಿಕರಿಗೆ ಕೊಟ್ಟಿದ್ದಾರೆ. ನಂತರ ಅವರು ಕರೆದಲ್ಲಿಗೆ, ಕೇಳಿದ್ದನ್ನ ತಲುಪಿಸುತ್ತಿದ್ದಾರೆ. ಇವರು ಶಿಪ್ಪಿಂಗ್ ಚಾರ್ಜ್ ಮಾಡಲ್ಲ. ಕೇವಲ ಆ ವಸ್ತುವಿನ ಬೆಲೆ ಎಷ್ಟಿದ್ಯೋ ಅದನ್ನ ಮಾತ್ರ ಪಡೆಯುತ್ತಾರೆ ಎಂದು ಗೃಹಿಣಿ ಶಾಂತಮ್ಮ ತಿಳಿಸಿದ್ದಾರೆ.
ಈ ಸೇವೆಯನ್ನ ಪ್ರಾರಂಭ ಮಾಡಿ ಕೇವಲ ಒಂದು ದಿನ ಆಗಿದೆ. ಆಗಲೇ ಬೀದಿಬದಿ ವ್ಯಾಪಾರಿಗಳ ಕಾರ್ಯಕ್ಕೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಕೊರೊನಾ ನಿಯಂತ್ರಣ ಮಾಡಬಹುದು. ಅಲ್ಲದೇ ಜನರೂ ಕೂಡ ಇವರಿಗೆ ಸಹಕಾರ ನೀಡಬೇಕು ಎಂದು ಮಹಿಳೆಯರು ಹೇಳಿದ್ದಾರೆ.