– 200 ಹಾಸಿಗೆಯ ಕೇರ್ ಸೆಂಟರ್ ಬಳಕೆಗೆ ಸಿದ್ಧ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೀಗಾಗಿ ತಮ್ಮ ಕ್ಷೇತ್ರದ ಜನರ ರಕ್ಷಣೆ ಹಾಗೂ ಸುರಕ್ಷತೆಗಾಗಿ ಹಾಗೂ ಸೋಂಕಿತರ ಆರೈಕೆಗಾಗಿ ಶಾಸಕರು ರಾಜ್ಯ ಕಾರ್ಮಿಕ ಇಲಾಖೆಯ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದಾರೆ.
ಟಿ.ದಾಸರಹಳ್ಳಿಯ ಶಾಸಕ ಆರ್.ಮಂಜುನಾಥ್ ತಮ್ಮ ಕ್ಷೇತ್ರದ ಜನರ ರಕ್ಷಣೆಗಾಗಿ ಈ ಕೆಲಸ ಮಾಡಿದ್ದು, ಬೆಂಗಳೂರು ಹೊರವಲಯದ ಟಿ.ದಾಸರಹಳ್ಳಿಯ ಬಗಲಗುಂಟೆ ವಾರ್ಡ್ ನಲ್ಲಿರುವ ರಾಜ್ಯದ ಕಾರ್ಮಿಕ ಇಲಾಖೆಯ ಸಮುದಾಯ ಭವನದಲ್ಲಿ ಸುಮಾರು 200 ಹಾಸಿಗೆಯ ಕೇರ್ ಸೆಂಟರ್ ಸಜ್ಜಾಗಿದೆ. ಕೇರ್ ಸೆಂಟರ್ ಸಿದ್ಧತೆಯನ್ನು ಆರ್.ಮಂಜುನಾಥ್ ಇಂದು ವೀಕ್ಷಿಸಿದರು.
ಆಹಾರ ಸಚಿವ ಗೋಪಾಲಯ್ಯ ಸಹಕಾರದಿಂದ ನಿರ್ಮಾಣವಾಗಿರುವ ಈ ಕೇರ್ ಸೆಂಟರ್ ನಲ್ಲಿ, ಕೊರೊನಾ ವಾರಿಯರ್ಸ್ ಹಾಗೂ ಜನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಬೆಡ್ ಗಳು, ಹೊದಿಕೆ, ಫ್ಯಾನ್, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ, ಮನರಂಜನಾ ಕೊಠಡಿ ಹಾಗೂ ಪ್ರತ್ಯೇಕ ಊಟದ ಹಾಲ್ ನಿರ್ಮಾಣ ಮಾಡಲಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್, ಡಿ ಗ್ರೋಪ್ ನೌಕರರಿಗೆ ಪ್ರತ್ಯೇಕವಾಗಿ ಎಲ್ಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.