ಕಾರವಾರ: ಲಾಕ್ಡೌನ್ ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಮಂಗಳೂರಿಗೆ ತೆರಳುತಿದ್ದ ಕಾರ್ಮಿಕರನ್ನು ತುಂಬಿದ್ದ ತೂಫಾನ್ ವಾಹನವೊಂದು ಪಲ್ಟಿಯಾಗಿ ಚಾಲಕ ಸೇರಿ 14 ಮಂದಿ ಮಹಿಳಾ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಕುಮಟಾದ ರಾಷ್ಟ್ರೀಯ ಹೆದ್ದಾರಿ 66 ರ ಕೈರೆ ಬಳಿ ನಡೆದಿದೆ.
ಕುಷ್ಟಗಿಯಿಂದ ಮಂಗಳೂರಿಗೆ 14 ಜನ ಕಟ್ಟಡ ಕಾರ್ಮಿಕರ ಕರೆದೊಯ್ಯುತ್ತಿದ್ದ ತೂಫಾನ್ ವಾಹನವನ್ನು ಚಾಲಕ ಅತೀ ವೇಗವಾಗಿ ಚಲಾಯಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರ ಕೈರೆ ಬಳಿ ಪಲ್ಟಿ ಹೊಡೆದಿದೆ. ಕೊರೊನಾ ನಿಯಮ ಮೀರಿ ಹೆಚ್ಚು ಜನರನ್ನು ತುಂಬಿ ಕರೆದೊಯ್ಯುತಿದ್ದ ಸಂದರ್ಭ ಪೊಲೀಸರು ಹಿಡಿಯುವ ಭಯದಲ್ಲಿ ತೂಫಾನ್ ವಾಹನ ಚಾಲಕ ಅತೀ ವೇಗದಿಂದ ವಾಹನ ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ.
ಘಟನೆಯಲ್ಲಿ ವಾಹನದ ಚಾಲಕ ಸೇರಿ 14 ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಗಾಗಿ ಮಣಿಪಾಲ್ ಗೆ ರವಾನೆ ಮಾಡಲಾಗಿದೆ. ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.