ಉಡುಪಿ: ಜಿಲ್ಲೆಯ ಕಾರ್ಕಳ ಶಾಸಕ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿಬಂದಿದೆ.
ಸುನೀಲ್ ಕುಮಾರ್ ಸರ್ಕಾರಿ ಕಾಮಗಾರಿಯ ಗುತ್ತಿಗೆ ನೀಡಿರುವ ಕಾಂಟ್ರಾಕ್ಟರ್ ಗಳಿಂದ ನೂರಾರು ಗೋಣಿ ಸಿಮೆಂಟ್ ಪಡೆದು ತನ್ನ ಖಾಸಗಿ ಕಚೇರಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ವೀಡಿಯೋಗಳನ್ನು ಕಾಂಗ್ರೆಸ್ಸಿನವರು ರಿಲೀಸ್ ಮಾಡಿದ್ದಾರೆ. ಕಾರ್ಕಳ ನಗರಸಭೆಯ ಸದಸ್ಯ ಕಾಂಗ್ರೆಸ್ ನಾಯಕ ಶುಭದ ರಾವ್ ಈ ಆರೋಪವನ್ನು ಮಾಡಿದ್ದಾರೆ. ಕಾರ್ಕಳ ತಾಲೂಕು ಪಂಚಾಯತ್ ರಸ್ತೆಯಲ್ಲಿ ಸುನೀಲ್ ಕುಮಾರ್ ಅವರ ಖಾಸಗಿ ಜಮೀನಿನಲ್ಲಿ ಬಹು ಮಹಡಿಯ ಕಚೇರಿ ನಿರ್ಮಾಣ ಆಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಅಲ್ಟ್ರಾ ಟೆಕ್ ಕಂಪನಿಯ ನಾಟ್ ಫಾರ್ ಸೇಲ್ ಎಂದು ನಮೂದಿಸಿರುವ ಸಿಮೆಂಟ್ ಗಳನ್ನು ಬಳಸಲಾಗಿದೆ. ಗುತ್ತಿಗೆ ನೀಡಿದ ಕಾಂಟ್ರಾಕ್ಟ್ ಗಳಿಂದ ಶಾಸಕ ಸುನೀಲ್ ಕುಮಾರ್ ಸಿಮೆಂಟ್ ಚೀಲಗಳನ್ನು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕ ಸುನೀಲ್ ಕುಮಾರ್ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ. ಸರ್ಕಾರಿ ವ್ಯವಸ್ಥೆಗಳನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಲೋಕಾಯುಕ್ತರಿಗೆ ದೂರು ನೀಡಲು ಕಾರ್ಕಳ ಕಾಂಗ್ರೆಸ್ ನಿರ್ಧರಿಸಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ನಗರಸಭೆ ಸದಸ್ಯ ಶುಭದ್ ರಾವ್ ಒತ್ತಾಯಿಸಿದ್ದಾರೆ.