ಉಡುಪಿ: ಚಿನ್ನದ ಆಭರಣಗಳನ್ನು ಇಡುವ ಬಾಕ್ಸ್ ತಯಾರಿಕಾ ಘಟಕಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಪ್ರಭಾಕರ ಶೆಣೈ ಎಂಬವರು ಮನೆಯ ಮೇಲ್ಭಾಗದಲ್ಲಿ ಚಿನ್ನದ ಆಭರಣಗಳನ್ನು ಇಡುವ ಬಾಕ್ಸ್ ತಯಾರಿಕಾ ಘಟಕವನ್ನು ಕೆಲ ವರ್ಷದ ಹಿಂದೆ ಆರಂಭಿಸಿದ್ದರು. ಇಂದು ಆಕಸ್ಮಿಕವಾಗಿ ಘಟಕಕ್ಕೆ ಬೆಂಕಿ ತಗುಲಿದ್ದು ಒಳಗಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿದೆ.
ಬೆಂಕಿಯ ಕೆನ್ನಾಲಗೆ ಚಾಚುತ್ತಿದ್ದಂತೆ ಸುತ್ತಮುತ್ತಲಿನವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಅಗ್ನಿಶಾಮಕ ದಳ ಬರುವಷ್ಟರಲ್ಲಿ ಘಟಕ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ಒಳಪ್ರವೇಶ ಮಾಡಿ ಬೆಂಕಿ ಕೆಳಗೆ ಇರುವ ಮನೆಗೆ ಸುತ್ತಮುತ್ತಲೂ ಹಬ್ಬದಂತೆ ನಂದಿಸುವ ಪ್ರಕ್ರಿಯೆ ನಡೆಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.
ಕಾರ್ಕಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಲಕ್ಷಾಂತರ ಮೌಲ್ಯದ ಯಂತ್ರಗಳು, ಚಿನ್ನಾಭರಣ ಇಡುವ ಬಾಕ್ಸ್ ಗಳು ಸುಟ್ಟು ಕರಕಲಾಗಿದೆ ಎಂದು ಮಾಲೀಕ ಸುಧೀ ಪ್ರಭು ಮಾಹಿತಿ ನೀಡಿದರು. ಮೊದಲೇ ಲಾಕ್ ಡೌನ್ ನಿಂದ ಉದ್ಯಮ ನಷ್ಟದಲ್ಲಿತ್ತು. ಇದು ದೊಡ್ಡ ಹೊಡೆತ ಅಂತ ಅವರು ನಷ್ಟದ ನೋವು ವ್ಯಕ್ತಪಡಿಸಿದರು.