ಶಿವಮೊಗ್ಗ: ವಾತಾರಣದಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಕೊರೊನಾ ಆ ರೀತಿ ಕಾಯಿಲೆ ಅಲ್ಲ. ಕೊರೊನಾ ಎನ್ನುವುದು ಸ್ವಾಭಿಮಾನಿ ಕಾಯಿಲೆ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊರೊನಾ ಎನ್ನುವುದು ಬಹಳ ದೊಡ್ಡ ಕಾಯಿಲೆ ಅಲ್ಲ. ನಿರ್ಲಕ್ಷ್ಯ ಮಾಡುವವರಿಗೆ ದೊಡ್ಡ ಕಾಯಿಲೆ. ಹೀಗಾಗಿಯೇ ಕಾಯಿಲೆಗಳಲ್ಲಿಯೇ ಅತೀ ಸ್ವಾಭಿಮಾನಿ ಕಾಯಿಲೆ ಎನ್ನುವುದು ಇದ್ದರೆ ಅದು ಕೊರೊನಾ ಕಾಯಿಲೆ ಎಂದರು. ಇದನ್ನು ಓದಿ: ವಿಜಯನಗರ, ಉಡುಪಿಯಲ್ಲಿ ಅರ್ಚಕರಿಗೆ ಫುಡ್ ಕಿಟ್ ವಿತರಣೆ
ಕೊರೊನಾ ಎನ್ನುವುದು ಹೊರಗಡೆಯೇ ಇರುತ್ತದೆ. ನೀನು ಹೋಗಿ ಮಾತನಾಡಿಸುವ ತನಕ, ನೀನು ಹೋಗಿ ಮುಟ್ಟಿಕೊಳ್ಳುವ ತನಕ, ನೀನು ಹೋಗಿ ಅಲ್ಲಿ ಒದ್ದಾಡುವ ತನಕ ಅದು ನಿನ್ನ ಬಳಿ ಸುಳಿಯುವುದೇ ಇಲ್ಲ. ನೀವು ಅದನ್ನು ಮಾತನಾಡಿಸಲಿಲ್ಲ ಅಂದರೆ ನೀವು ಸೇಫ್ ಆಗಿರುತ್ತೀರಾ. ಹೀಗಾಗಿಯೇ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಬಳಸಬೇಕು. ಜೊತೆಗೆ ಸ್ವಾಭಿಮಾನಿ ಕೊರೊನಾ ನಮ್ಮ ಮನೆಯೊಳಗೆ ಬಾರದಂತಹ ರೀತಿ ನೋಡಿಕೊಳ್ಳಬೇಕು. ಎಲ್ಲರೂ ಜಾಗೃತರಾಗಿರಬೇಕು ಎಂದು ಸ್ವಾಮೀಜಿ ತಿಳಿಸಿದರು. ಇದನ್ನು ಓದಿ: ರಾಜ್ಯ ಅನ್ಲಾಕ್ ಆದ್ರೂ ದೇಗುಲ ತಕ್ಷಣ ತೆರೆಯಲ್ಲ: ಕೋಟ ಶ್ರೀನಿವಾಸ ಪೂಜಾರಿ