ಚಿಕ್ಕಮಗಳೂರು: ಕೊರೊನಾ ಆತಂಕ ಆರಂಭವಾದಾಗಿನಿಂದ ಗ್ರೀನ್ ಝೋನ್ನಲ್ಲಿದ್ದ ಕಾಫಿನಾಡು ಚಿಕ್ಕಮಗಳೂರಲ್ಲಿ ಮೂರೇ ದಿನಕ್ಕೆ ಸೋಂಕಿತರ ಸಂಖ್ಯೆ 10ಕ್ಕೆ ಏರಿದ್ದು ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ.
55 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆ ಹಸಿರು ವಲಯದಲ್ಲಿತ್ತು. ಆದರೆ ಮೂಡಿಗೆರೆ ವೈದ್ಯರು ಹಾಗೂ ತರೀಕೆರೆಯ ಗರ್ಭಿಣಿಯ ಪ್ರಕರಣದಿಂದ ಆರಂಭವಾದ ಪ್ರಕರಣಗಳು ಇಂದು ಹತ್ತಾಗಿವೆ. ಮೇ 19ರಂದು ಬೆಳಗ್ಗಿನ ಹೆಲ್ತ್ ಬುಲೆಟಿನ್ನಲ್ಲಿ 2 ಪಾಸಿಟಿವ್ ಪ್ರಕರಣಗಳು ಬಂದಿದ್ದವು. ಸಂಜೆಯ ಹೆಲ್ತ್ ಬುಲೆಟಿನ್ನಲ್ಲಿ ಮತ್ತೆ ಮೂರು ಪ್ರಕರಗಳು ಬಂದಿದ್ದವು. ಇಂದಿನ ಬುಲೆಟಿನ್ನಲ್ಲಿ ಮತ್ತೆ ಐದು ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ ಒಟ್ಟು 10ಕ್ಕೆ ಏರಿದೆ.
ಜಿಲ್ಲೆಯ ಜನರಿಗೆ ಒಂದೆಡೆ ಸಮಾಧಾನ ಅಂದರೆ 10ರಲ್ಲಿ ಎಂಟು ಪ್ರಕರಣಗಳು ಮುಂಬೈನಿಂದ ಬಂದವರು. ಅಲ್ಲಿಂದ ಬಂದವರು ಚೆಕ್ ಪೋಸ್ಟ್ ನಲ್ಲಿ ತಪಾಸಣೆಗೊಳಪಟ್ಟು ನೇರ ಕ್ವಾರಂಟೈನ್ ಘಟಕಕ್ಕೆ ಹೋಗಿದ್ದರು. ಅವರ ಪಾಸಿಟಿವ್ ಪ್ರಕರಣ ಜಿಲ್ಲೆಯ ಜನರಿಗೆ ಯಾವುದೇ ಭಯವನ್ನಾಗಲಿ, ಆತಂಕವನ್ನಾಗಲಿ ತಂದಿಲ್ಲ. ಆದರೆ ಜಿಲ್ಲೆಯ ಜನ ಭಯಪಟ್ಟಿರೋದು ಮೂಡಿಗೆರೆಯ ವೈದ್ಯ ಹಾಗೂ ತರೀಕೆರೆಯ ಗರ್ಭಿಣಿಯ ಪ್ರಕರಣ. ಯಾಕೆಂದರೆ ಜಿಲ್ಲಾಡಳಿತಕ್ಕೆ ಈವರೆಗೂ ವೈದ್ಯ ಹಾಗೂ ಗರ್ಭಿಣಿಯ ಸೋಂಕಿನ ಮೂಲವೇ ತಿಳಿದಿಲ್ಲ. ಇದು ಜಿಲ್ಲಾಡಳಿತಕ್ಕೂ ಕೂಡ ತಲೆನೋವು ತರಿಸಿದೆ.
ಇವರಿಬ್ಬರ ಸೋಂಕಿನ ಮೂಲವೇ ತಿಳಿಯದಿರೋದ್ರಿಂದ ಜಿಲ್ಲೆಯ ಜನ ಈ ಎರಡು ಪ್ರಕರಣಗಳ ಬಗ್ಗೆ ಗಾಬರಿಯಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಕೂಡ ವೈದ್ಯ ಹಾಗೂ ಗರ್ಭಿಣಿಯ ಸೋಂಕಿನ ಮೂಲದ ಹುಡುಕಾಟದಲ್ಲಿದೆ. ಅವರ ಸಂಪರ್ಕಿತರನ್ನ ಕ್ವಾರಂಟೈನ್ಗೆ ಒಳಪಡಿಸಿ, ಎಲ್ಲರ ವರದಿಯನ್ನ ಎದುರು ನೋಡುತ್ತಿದೆ. ಈ ಮಧ್ಯೆ ಮತ್ತೊಂದು ಸಮಾಧಾನಕರ ಸಂಗತಿ ಅಂದ್ರೆ ಮೂಡಿಗೆರೆ ವೈದ್ಯ ಕೂಡ ಆರೋಗ್ಯವಾಗಿದ್ದು, ಆತನಿಂದ ಕೊರೊನ ಸೋಂಕು ಮತ್ತೊಬ್ಬರಿಗೆ ಹರಡಿರೋ ಸಾಧ್ಯತೆ ತೀರಾ ಕಡಿಮೆ ಎಂಬ ಮಾತು ಕೇಳಿ ಬರುತ್ತಿರೋದು ಮೂಡಿಗೆರೆ ಜನರ ಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ಕೂಡ ವೈದ್ಯರ ಸಂಪರ್ಕದಲಿದ್ದ 800 ಜನರನ್ನ ಕ್ವಾರಂಟೈನ್ಗೆ ಒಳಪಡಿಸಿದೆ. 400 ಜನರ ವರದಿ ಕಾಯುತ್ತಿದೆ. ಆ ವರದಿಗಳು ನೆಗೆಟಿವ್ ಬರಲಿ ಎಂದು ಜನ ದೇವರಲ್ಲಿ ಪ್ರಾರ್ಥಿಸಿಕೊಳ್ತಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ ಕೂಡ ಜನರಿಗೆ ಧೈರ್ಯ ತುಂಬುತ್ತಿದ್ದು, ಯಾರೂ ಹೆದರಬೇಡಿ. ಎಂತಹ ಸನ್ನಿವೇಶವನ್ನೂ ಫೇಸ್ ಮಾಡೋದಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಹೇಳಿದೆ.