ರಾಯಚೂರು: ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದ ಜಿಲ್ಲೆಯ ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಇಬ್ಬರು ಮೊಮ್ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಹಾಗೂ ಕುಟುಂಬಸ್ಥರು ನಿನ್ನೆ ಮಧ್ಯಾಹ್ನದಿಂದ ಹುಡುಕಾಟ ನಡೆಸಿದ್ದರೂ ಬಾಲಕರು ಪತ್ತೆಯಾಗಿರಲಿಲ್ಲ. 9 ವರ್ಷದ ವರುಣ್, 5 ವರ್ಷದ ಸಣ್ಣಯ್ಯ ಸಾವನ್ನಪ್ಪಿರುವ ಬಾಲಕರು.
ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಿಂದ ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ನಾಪತ್ತೆಯಾಗಿದ್ದರು. ಮನೆಯ ಹೊರಗಡೆ ಆಟವಾಡುತ್ತಿದ್ದ ಬಾಲಕರು ಏಕಾಏಕಿ ನಾಪತ್ತೆಯಾಗಿದ್ದರು ,ಇದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು. ಆದ್ರೆ ಮಕ್ಕಳು ಹಳ್ಳದಲ್ಲಿ ಸ್ನಾನ ಮಾಡಲು ಹೋಗಿ ಪ್ರಾಣಕಳೆದುಕೊಂಡಿದ್ದಾರೆ. ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಾಪತ್ತೆಯಾದ ಬಾಲಕರಿಗಾಗಿ ನಿನ್ನೆಯಿಂದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಸಿರವಾರ ಹಾಗೂ ಕವಿತಾಳ ಠಾಣೆ ಪೊಲೀಸರಿಂದ ಬಾಲಕರಿಗಾಗಿ ಹುಡುಕಾಟ ನಡೆದಿತ್ತು, ಗ್ರಾಮದ ಹಳ್ಳದಲ್ಲೇ ಇಂದು ಬೆಳಗ್ಗೆ ಶವಗಳು ಪತ್ತೆಯಾಗಿವೆ.
ಹಂಪಯ್ಯ ನಾಯಕ್ ಕೊನೆಯ ಪುತ್ರ ಶಿವಾನಂದ ಮಕ್ಕಳಾದ ವರುಣ್ ಹಾಗೂ ಸಣ್ಣಯ್ಯ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.