ಚಿಕ್ಕಬಳ್ಳಾಪುರ: ಇಲ್ಲಿನ ಅರಣ್ಯ ಪ್ರದೇಶದಲ್ಲಿ ರಾಶಿ ರಾಶಿ ಕೋಳಿ ಮರಿಗಳು ಪತ್ತೆಯಾಗಿದ್ದು, ಕೋಳಿ ಮರಿಗಳನ್ನು ಗ್ರಾಮಸ್ಥರು ಮನೆಗಳಿಗೆ ಹೊತ್ತೊಯ್ದ ಘಟನೆ ಚಿಕ್ಕಬಳ್ಳಾಪುರ ತಾಲೂಕು ಕಣಿತಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮ ಹೊರವಲಯದ ಅರಣ್ಯ ಪ್ರದೇಶದಲ್ಲಿ ಹಿಂಡು ಹಿಂಡು ಫಾರಂ ಕೋಳಿ ಮರಿಗಳನ್ನ ಕಂಡು ಗ್ರಾಮಸ್ಥರ ಬ್ಯಾಗ್, ಚೀಲ, ಪ್ಲಾಸ್ಟಿಕ್ ಬಿನ್, ಟಬ್ ಗಳಲ್ಲಿ ಮನೆಗೆ ಕೊಂಡೊಯ್ದಿದ್ದಾರೆ. ಅರಣ್ಯ ಪ್ರದೇಶದಲ್ಲಿ ಚಿಲಿ ಪಿಲಿ ಅಂತ ಸಾವಿರಾರು ಕೋಳಿ ಮರಿಗಳ ಒಡಾಟ ಸಾಗಿದೆ.
ಕೋಳಿ ಮರಿಗಳು ಇಲ್ಲಿಗೆ ಬಂದಿದ್ದು ಹೇಗೆ..?
ಅಸಲಿಗೆ ರಾಜ್ಯದಲ್ಲಿ ಫಾರಂ ಕೋಳಿ ಸಾಕಾಣಿಕೆದಾರ ರೈತರು ಹಾಗೂ ಚಿಕನ್ ಗೆ ಕೋಳಿ ಸಪ್ಲೈ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ನಡುವೆ ಜಟಾಪಟಿ ನಡೀತಿದ್ದು ಕಂಪನಿಗಳ ವಿರುದ್ಧ ಸಾಕಾಣಿಕೆದಾರರು ಹೋರಾಟ ನಡೆಸಿದ್ದಾರೆ. ಪ್ರಮುಖವಾಗಿ ಎಂಎನ್ಸಿ ಕಂಪನಿಗಳು ಸಾಕಾಣಿಕೆದಾರರಿಗೆ ಕೋಳಿ ಮರಿಗಳನ್ನ ಸಪ್ಲೈ ಮಾಡಲಿದ್ದು, ಆ ಮರಿಗಳನ್ನ ಸಾಕಾಣಿಕೆ ಮಾಡಿ ಅದೇ ಕಂಪನಿಯವರಿಗೆ ವಾಪಾಸ್ ಮಾಡಲಿದ್ದಾರೆ. ಆಗ ಕಂಪನಿಯವರು ಕೋಳಿ ಸಾಕಾಣಿಕೆ ಮಾಡಿದ್ದಕ್ಕೆ ಪ್ರತಿ ಕೆ.ಜಿ ಗೆ 2-3 ರೂಪಾಯಿ ಕೊಡಲಾಗುತ್ತಿದೆ.
ಆದರೆ ಕೆಲವೊಮ್ಮೆ ಕೋಳಿ ಚೆನ್ನಾಗಿ ದಷ್ಟ ಪುಷ್ಟವಾಗಿ ಬೆಳೆದಿಲ್ಲ ತೂಕ ಬರಲಿಲ್ಲವಾದರೆ ಹಣ ಕೊಡೋದಿಲ್ಲವಂತೆ. ಹೀಗಾಗಿ ನಮಗೆ ಸೂಕ್ತ ದರ ನಿಗದಿ ಮಾಡಿ ಕೊಡಬೇಕು ಅಂತ ಕಂಪನಿಗಳ ವಿರುದ್ಧ ಕೋಳಿ ಸಾಕಾಣಿಕೆದಾರರು ಹಲವು ದಿನಗಳಿಂದ ಹೋರಾಟ ನಡೆಸುತ್ತಾ ಬರ್ತಿದ್ದಾರೆ.
ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ಬೆಂಗಳೂರಿನ ಪಶು ಸಂಗೋಪನಾ ಇಲಾಖೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಪಶು ಭವನದಲ್ಲಿ ಸಭೆ ನಡೆಸಿ ಇದೇ ತಿಂಗಳ 11 ರಂದು ಎಂಎನ್ಸಿ ಕಂಪನಿಗಳು ಹಾಗೂ ಸಾಕಾಣಿಕೆದಾರರ ನಡುವೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ನೀಡಲಾಗಿದೆ. ಆದರೆ ಈ ಭರವಸೆಗೆ ಸಾಕಾಣಿಕೆದಾರರು ಷರತ್ತು ವಿಧಿಸಿದ್ದು, ಸಭೆ ನಡೆಸುವ ದಿನದದವರಗೂ ನಾವು ಯಾವುದೇ ಎಂಎನ್ಸಿ ಕಂಪನಿಗಳಿಂದ ಕೋಳಿ ಮರಿಗಳನ್ನ ಪಡೆದುಕೊಳ್ಳುವುದಿಲ್ಲ.
ಈಗಾಗಲೇ ಫಾರಂ ಗಳಲ್ಲಿ ಇರೋ ಕೋಳಿ ಗಳನ್ನ ಮಾರಾಟಕ್ಕೆ ಕೋಡೋದಿಲ್ಲ ಅಂತ ಹೇಳಿದ್ರು. ಆದರೆ ಈ ಮಧ್ಯೆ ಸಾಕಾಣಿಕೆದಾರರ ಷರತ್ತಿನ ವಿಚಾರ ಗೊತ್ತೊದ್ದೋ ಅಥವಾ ಗೊತ್ತಿಲ್ಲದೆಯೋ ಎಂಎನ್ಸಿ ಕಂಪನಿಗಳ ಕೋಳಿ ಮರಿಗಳನ್ನ ಫಾರಂಗಳಿಗೆ ಸಾಗಾಟ ಮಾಡುವ ಕೆಲಸ ಮುಂದುವರಿಸಿದ್ದಾರೆ. ಹೀಗಾಗಿ ಮೊದಲೇ ಷರತ್ತು ವಿಧಿಸಿರೋ ಕೋಳಿ ಫಾರಂ ಸಾಕಾಣಿಕೆದಾರರು ಕೋಳಿ ಮರಿಗಳನ್ನ ಸಾಗಾಟ ಮಾಡೋ ವಾಹನಗಳು ಕಂಡು ಬಂದರೆ ವಾಹನಗಳನ್ನ ತಡೆದು ಅಡ್ಡ ಹಾಕಿ, ಆಗ ವಾಹನದಲ್ಲಿರೋ ಕೋಳಿ ಮರಿಗಳನ್ನ ಎಲ್ಲಂದರಲ್ಲಿ ಬಿಸಾಡೋ ಕೆಲಸ ಮಾಡ್ತಿದ್ದಾರೆ.
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಹಲವು ಕಡೆ ಕಳೆದ ಎರಡು ದಿನಗಳಿಂದ ಇದೇ ರೀತಿ ಕೋಳಿ ಮರಿಗಳನ್ನ ಬಿಸಾಡಲಾಗ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಹಾಗೂ ಕಣಿತಹಳ್ಳಿ ಬಳಿ ಈ ರೀತಿ ಕೋಳಿ ಮರಿಗಳನ್ನ ಬಿಸಾಡಿ ಸಾಕಾಣಿಕೆರದಾರರು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದ್ದಾರೆ.