ಕಾರವಾರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ರೀತಿ ನೋಡಿದರೆ ಎಂತವರೂ ಬೆಚ್ಚಿ ಬೀಳಲೇ ಬೇಕು.
ಹೌದು ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಯಲ್ಲಾಪುರದ ಕೊಂಕಣ ಕೊಪ್ಪದ ಶಿವರಾಮ ರಾಮಕೃಷ್ಣ ಹೆಗಡೆ (60) ಎಂಬುವವರು ತಮ್ಮ ಬಹು ದಿನದ ರೋಗದಿಂದ ಜಿಗುಪ್ಸೆಗೊಂಡಿದ್ದರು. ತಾನು ಸಾಯಬೇಕು ಎಂದು ಸತತ ಎರಡು ತಿಂಗಳಿಂದ ಆಹಾರ ಸೇವನೆ ಬಿಟ್ಟಿದ್ದರು. ನಂತರ ಇವರು ಮನೆಯ ಹತ್ತಿರದ ಕಾಡಿನಲ್ಲಿ ಮರದ ಕಟ್ಟಿಗೆಗಳನ್ನು ಒಟ್ಟುಮಾಡಿ ಚಿತೆಯನ್ನು ಉರಿಸಿ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ರಾಮಕೃಷ್ಣ ಹೆಗಡೆ ಕಾಣದಿದ್ದಾಗ ಕುಟುಂಬಸ್ಥರು ಹುಡುಕಿದ್ದಾರೆ. ಈತನ ಮನೆಯ ಸ್ವಲ್ಪ ದೂರದಲ್ಲೇ ಕಾಡಿನಲ್ಲಿ ಈತನ ಬಟ್ಟೆಗಳು ಕಾಣಿಸಿದ್ದು, ಅಲ್ಲಿಯೇ ಉರಿದು ಆರಿಹೋದ ಚಿತೆಯೂ ಕಂಡಿದೆ. ಅಲ್ಲಿ ದೇಹದ ಮೂಳೆಗಳು ಸಿಕ್ಕ ಕಾರಣ ಈತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತು ಪತ್ತೆ ಹಚ್ಚಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.