ಚಾಮರಾಜನಗರ: ಕಾಂಗ್ರೆಸ್ ಕೇವಲ ತಿಥಿಗಳನ್ನು ಮಾಡುವ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೆಹರು ತಿಥಿ, ಗಾಂಧಿ ತಿಥಿ ಸೇರಿದಂತೆ ವರ್ಷಕ್ಕೈದ ತಿಥಿಗಳ ಆಚರಣೆ ಮಾತ್ರ ಇದೆ. ಅವರಲ್ಲಿ ಗ್ರಾಮಸ್ವರಾಜ್ ಇಲ್ಲ, ಗ್ರಾಮಸೇವಕ ಇಲ್ಲ, ಈಗ ನಮ್ಮ ಕಾರ್ಯಕ್ರಮಗಳ್ನು ನಕಲು ಮಾಡಲು ಹೊರಟಿದ್ದಾರೆ ಎಂದರು.
ಯಾವ ಕಾಂಗ್ರೆಸ್ ಒಂದು ಕಾಲದಲ್ಲಿ ಹಸುಕರುವಿನ ಚಿಹ್ನೆಯಿಂದ ಗೆದ್ದಿತ್ತೋ, ಯಾವ ಕಾಂಗ್ರೆಸ್ ಜೋಡೆತ್ತಿನ ಚಿಹ್ನೆಯಿಂದ ಗೆದ್ದಿತ್ತೋ. ಆ ಪಕ್ಷ ಇಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ. ಕಾಂಗ್ರೆಸ್ ನಾಯಕರು ಗೋ ಮಾಂಸ ತಿನ್ನುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಅವರು ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ. ಅವರಿಗೆ ಗೋ ಶಾಪ ತಟ್ಟಿದೆ. ಹಾಗಾಗಿ ಕಾಂಗ್ರೆಸ್ ಅರಬ್ಬಿ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಮುಂದಿನ ಚುನಾವಣೆಯಲ್ಲಿ ನಿರ್ನಾಮವಾಗುತ್ತೆ ಎಂದು ಕಿಡಿಕಾರಿದರು.