ಬೆಂಗಳೂರು: ಕಾಂಗ್ರೆಸ್ ಅಂಗಳದಿಂದ ಒಂದು ಕಾಲು ಹೊರ ಇಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈ ನಾಯಕರು ಮುಂದಾಗಿದ್ರೆ, ಇತ್ತ ಜೆಡಿಎಸ್ ಇಬ್ರಾಹಿಂ ಜೊತೆ ನಿರಂತರವಾಗಿ ಸಂಪರ್ಕದಲ್ಲಿದೆ. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಸಿ.ಎಂ.ಇಬ್ರಾಹಿಂ ಪ್ರಮುಖ ಪಾತ್ರ ವಹಿಸುವ ಹಿನ್ನೆಲೆ ಎರಡೂ ಪಕ್ಷಗಳು ಓಲೈಕೆಗೆ ಮುಂದಾಗಿವೆ.
ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ ಮೂಲಕ ಸಿ.ಎಂ.ಇಬ್ರಾಹಿಂ ಮನವೊಲೈಕೆ ಯತ್ನ ನಡೆದಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರಂತರವಾಗಿ ಇಬ್ರಾಹಿಂ ಮನಪರಿವರ್ತನೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತ ಜೆಡಿಎಸ್ ಸಹ ಸಿ.ಎಂ.ಇಬ್ರಾಹಿಂ ಬರಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಇದುವರೆಗೂ ಸಿ.ಎಂ.ಇಬ್ರಾಹಿಂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಯಾರಿಗೆ ಲಾಭ? ನಷ್ಟ?: ಇಬ್ರಾಹಿಂ ಕಾಂಗ್ರೆಸ್ ಬಿಟ್ಟರೆ ಅಲ್ಪಸಂಖ್ಯಾತ ನಾಯಕನನ್ನು ಕಳೆದುಕೊಂಡಂತಾಗುತ್ತದೆ. ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾದ್ರೆ ದಳಪತಿಗಳು ಬಳಗಕ್ಕೆ ದೊಡ್ಡಶಕ್ತಿ ಬರಲಿದ್ದು, ಜೆಡಿಎಸ್ಗೆ ಮತ್ತಷ್ಟು ಅಲ್ಪಸಂಖ್ಯಾತ ಮತಗಳು ಗಟ್ಟಿ ಆಗಲಿದೆ. ಜೆಡಿಎಸ್ನಲ್ಲಿ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ಸಂಭವವಿದೆ. ಇಬ್ರಾಹಿಂ ಪಕ್ಷ ಬಿಟ್ರೆ ಅವರ ಬೆಂಬಲಿಗರೂ ಕಾಂಗ್ರೆಸ್ಗೆ ಗುಡ್ಬೈ ಹೇಳಬಹುದು.