– ಕಾಂಗ್ರೆಸ್ನವರು ನಮ್ಮ ಸದಸ್ಯೆಯನ್ನ ಕಿಡ್ನಾಪ್ ಮಾಡಿದ್ದರು
ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಅವರು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ. ಅಲ್ಲದೇ ಮಹಿಳಾ ಸದಸ್ಯೆಯ ರಕ್ಷಣೆಗೆ ನಾನು ಮುಂದಾಗಿದ್ದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾಹಿತಿ ನೀಡಿದ ಮಾತನಾಡಿದ ಶಾಸಕ ಸಿದ್ದು ಸವದಿ, ನಮ್ಮ ಮಹಿಳಾ ಸಮಸ್ಯೆಯನ್ನು ಕಾಂಗ್ರೆಸ್ ನಾಯಕರು ಕಿಡ್ನಾಪ್ ಮಾಡಿದ್ದರು. ಈ ವೇಳೆ ಅವರು ಚುನಾವಣೆಯಲ್ಲಿ ಮತ ಚಲಾಯಿಸಲು ಆಗಮಿಸಿದ್ದರು. ಈ ಹಂತದಲ್ಲಿ ಸದಸ್ಯೆ ಸವಿತಾ ಅವರನ್ನು ಕೆಲವರು ಹಿಡಿದು ಎಳೆದುಕೊಂಡು ಬರುತ್ತಿದ್ದರು. ನಾನು ಅವರ ಅಲ್ಲೇ ನಿಂತಿದ್ದರ ಕಾರಣ ಅವರ ರಕ್ಷಣೆಗೆ ಮುಂದಾಗಿದ್ದೆ. ಆದರೆ ಅಲ್ಲಿ ಕೆಲವರು ನನ್ನ ಮೇಲೆ ಬಿದ್ದು ಗದ್ದಲ ಮಾಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಅಸಭ್ಯ ವರ್ತನೆ ಮಾಡಿಲ್ಲ. ಇದನ್ನು ನಾನು ಕಾಂಗ್ರೆಸ್ ಅವರು ಕ್ರಿಯೇಟ್ ಮಾಡಿದ್ದಾರೆ. ನಮ್ಮ ನಾಲ್ವರು ಸದಸ್ಯರು ಮತ ಚಲಾಯಿಸಲು ಬರುತ್ತಿದ್ದರು. ಪುರಸಭೆ ಮಹಿಳಾ ಸದಸ್ಯೆ ಸವಿತಾ ಹುರಕಡ್ಲಿ ಅವರನ್ನು ಎಳೆದಾಡುತ್ತಿದ್ದರು. ಆಗ ನಾನು ಅವರನ್ನ ರಕ್ಷಣೆ ಮಾಡಲು ಮುಂದಾದೆ. ಸದಸ್ಯೆಯನ್ನು ಹಿಡಿದು ಎಳೆದಾಡುತ್ತಿದ್ದ ಜನರ ಕೈಯಿಂದ ಅವರನ್ನು ಬಿಡಿಸಲು ನಾನು ಮುಂದಾದೆ. ಮೆಟ್ಟಿಲುಗಳ ಮೇಲಿಂದ ಅವರು ಜಾರಿ ಬಿದ್ದರು. ನಾನು ನಮ್ಮ ಪಕ್ಷದ ಸದಸ್ಯೆಯನ್ನು 3 ಗಂಟೆಗೆ ಕಾಂಗ್ರೆಸ್ ಅವರು ಕಿಡ್ನಾಪ್ ಮಾಡಿದ್ದರು. ಆಕೆಯ ಪತಿ ನಮ್ಮೊಂದಿಗೆ ಇದ್ದರು. ಈ ಹಿಂದೆಯೂ ಮೂರು ಬಾರಿ ಕಾಂಗ್ರೆಸ್ ಅವರು ಇದೇ ರೀತಿ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಮಾತ ನೀಡಿ ಎಂಬುವುದು ತಪ್ಪಾ ಎಂದು ಪ್ರಶ್ನಿಸಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ನಡೆದಿದ್ದೇನು?
ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರು ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.