– ರಾಜ್ಯದಲ್ಲಿ ಸಾರಾ ಮಹೇಶ್ ಒಬ್ರೇ ಮೇಧಾವಿ ಅಂದ್ಕೊಂಡಿದ್ದಾರೆ
ಕೊಪ್ಪಳ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನವರು ಪ್ರೂವ್ ಮಾಡಿದ್ರೆ, ಆರೋಪಿಗಳು ಬಿಜೆಪಿ ಪಕ್ಷದವರಾಗಿದ್ದರೂ ಅವರನ್ನು ಒಳಗೆ ಹಾಕ್ತೀವಿ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ಸಿವರು ಅವರ ಪಕ್ಷದ ಶಾಸಕರಿಗೆ ಸಾಂತ್ವನ ಹೇಳೋದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಘಟನೆಗೆ ಬಿಜೆಪಿಯವರು ಕಾರಣ ಅನ್ನೋದೇ ಆದರೆ ಅವರು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡಲಿ. ಒಂದು ವೇಳೆ ಗಲಭೆಯಲ್ಲಿ ಬಿಜೆಪಿಯವರು ಇದ್ದರೂ ನಾವು ಅವರನ್ನು ಒಳಗೆ ಹಾಕ್ತೀವಿ ಎಂದರು.
ಶಾಸಕರನ್ನು ದಲಿತ ಅದು ಇದು ಎಂದು ವಿಂಗಡಣೆ ಮಾಡಬಾರದು. ಶಾಸಕರಿಗೆ ಅಂತ ಶೋಷಣೆಗಳು ಆಗೋ ಸ್ಥಿತಿ ಇರಲ್ಲ. ಅವರು ಎಲ್ಲರಿಗೂ ಸಮಾನರು, ಅವರು ದಲಿತರು ಹೌದ ಅಲ್ವೋ, ಆದರೆ ಕಾಂಗ್ರೆಸ್ಸಿನವರು ಮುಂದೆ ಬಂದು ಮಾತಾಡಬೇಕಿತ್ತು. ಅವರಿಗೆ ಸಾಂತ್ವನ ಹೇಳೋದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಎಸ್ಡಿಪಿಐ, ಪಿಎಫ್ಐ ಸಂಘಟನೆ ಬ್ಯಾನ್ ಮಾಡಲಿ ಎಂದ ರಾಮಲಿಂಗಾರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿರುವ ಪೊಲೀಸರು ಎರಡು ಸಂಘಟನೆಯಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ವರದಿ ಕೊಟ್ಟರೆ ನಾವು ಬ್ಯಾನ್ ಮಾಡುತ್ತೇವೆ. ನಮ್ಮ ಪೊಲೀಸರು ತನಿಖೆ ಮಾಡಿ ಯಾರಿಂದ ಆಗಿದೆ ಅನ್ನೋ ಬಗ್ಗೆ ವರದಿ ಕೊಡೋವರೆಗೂ ಮಾತಾಡೋದು ಬಾಲಿಶ ಎಂದು ತಿರುಗೇಟು ನೀಡಿದರು.
ಕಾನೂನು ಸಚಿವನಾಗಿ ನಾನು ಬ್ಯಾನ್ ಮಾಡ್ತೀನಿ, ಮಾಡಲ್ಲ ಅಂತ ಹೇಳಾಕಗಲ್ಲ. 1981ರಲ್ಲಿ ಕಾನೂನು ಇದೆ. ಇದರ ಹಿಂದೆ ಯಾರೇ ಇದ್ದರೂ ಅವರ ಅಸ್ತಿ ಮುಟ್ಟಗೋಲು ಹಾಕ್ತೀವಿ. ಮುಟ್ಟಗೋಲು ಹಾಕಿ ನಷ್ಟ ಭರಿಸ್ತೀವಿ. ಬೆಂಗಳೂರಿನಲ್ಲಿ ಇಂತಹ ಪರಸ್ಥಿತಿ ನಿರ್ಮಾಣ ಆಗತ್ತೆ ಎಂದು ಯಾರೂ ನೀರಿಕ್ಷೆ ಮಾಡಿರಲಿಲ್ಲ. ಗುಪ್ತಚರ ಇಲಾಖೆಯಲ್ಲಿ ಇರೋದು ಮನುಷ್ಯರೇ. ಒಂದೇ ಸಲ 3-4 ಸಾವಿರ ಬರ್ತಾರೆ ಅನ್ನೋದು ಗೊತ್ತಾಗಲ್ಲ. ಯಾವನೋ ಪೋಸ್ಟ್ ಮಾಡಿದ್ರೆ, 4 ಸಾವಿರ ಜನ ಬರುತ್ತಾರೆ ಅನ್ನೋದು ಗೊತ್ತಾಗಲ್ಲ. ಸಾರಾ ಮಹೇಶ್ ಏನ್ ಮಾಡಿದ್ರೂ ದೂರುತ್ತಾರೆ. ರಾಜ್ಯದಲ್ಲಿ ಇವರೊಬ್ಬರೇ ಮೇಧಾವಿ ಅಂದುಕೊಂಡಿದ್ದಾರೆ. ಇದಕ್ಕೆ ನಾವೇನ್ ಮಾಡೋಕೆ ಆಗಲ್ಲ ಎಂದರು.