– ರೈತ ಬಂದು ನನ್ನ ಪ್ರಶ್ನೆ ಮಾಡಲಿ
ಮೈಸೂರು: ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ಸಿನವರು ಬಾಯಿ ಮುಚ್ಚಿಕೊಂಡು ಮಾಸ್ಕ್ ಹಾಕಿಕೊಳ್ಳಲಿ. ರೈತರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿ ಎಂದು ಕೇಂದ್ರ ಸಚಿವ ಡಿ. ವಿ ಸದಾನಂದಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೊಸ ಕಾಯ್ದೆಗಳ ವಿರೋಧಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋರಾಟದಲ್ಲಿ ಬೀದಿಗೆ ಇಳಿದಿದ್ದು ಬಹುತೇಕ ರಾಜಕೀಯ ಕಾರ್ಯಕರ್ತರಾಗಿದ್ದು, ಹೀಗಾಗಿ ಆ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡಿದ್ದಾಗಿದೆ. ಕೆಲವ ರೈತ ಸಂಘಟನೆಯ ಸ್ವಯಂ ಘೋಷಿತ ನಾಯಕರು ಮಾತ್ರ ಪ್ರತಿಭಟನೆಯಲ್ಲಿ ಇದ್ದರು. ಕೇಂದ್ರ ಸರ್ಕಾರದ ನೂತನ ಕೃಷಿ ನೀತಿಗಳು ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಾನು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರವಾಗಿ ರೈತರ ಜೊತೆ ಮುಕ್ತ ಮಾತುಕತೆಗೆ ಸಿದ್ಧವಾಗಿದ್ದೇನೆ. ಆದರೆ ರಾಜಕೀಯ ನಾಯಕರ ಜೊತೆ ಮಾತನಾಡುವುದಿಲ್ಲ. ಯಾರೇ ರೈತರು ಬಂದು ನನ್ನನ್ನ ಪ್ರಶ್ನೆ ಮಾಡಲಿ, ಅವರೆಲ್ಲರಿಗೆ ಉತ್ತರ ಕೊಡುತ್ತೇನೆ. ಕಾಂಗ್ರೆಸ್ಸಿನವರು ಸೂಪರ್ ಮಾರ್ಕೆಟ್ಗೆ ಅನುಮತಿ ನೀಡಿ ಹೋಗಿದ್ದಾರೆ. ಈಗ ಎಪಿಎಂಸಿ ಒಳಗೆ ಕಾರ್ಪೋರೆಟ್ ಕಂಪನಿ ಬಂದಿದೆ ಅಂತಿದ್ದಾರೆ ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದರು.