ಹಾವೇರಿ: ರಾಜ್ಯಾದ್ಯಂತ ಇಂದು ನಾಗರ ಪಂಚಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊರೊನಾ ಮೂರನೇ ಅಲೆ ಭೀತಿಯ ನಡುವೆ ಹಲವರು ದೇವಸ್ಥಾನಕ್ಕೆ ತೆರಳದೆ ಮನೆಯಲ್ಲೇ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಹಾವೇರಿ ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಕಲ್ಲ ನಾಗದೇವರಿಗೆ ಹಾಲು ಎರೆಯದೆ, ಮಕ್ಕಳಿಗೆ ನೀಡುವ ಮೂಲಕ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಹೊಸಮಠದ ಆವರಣದಲ್ಲಿ ವಿಶಿಷ್ಟ ಕಾರ್ಯಕ್ರಮ ಮಾಡಿದ್ದು, ಶಿವಲಿಂಗೇಶ್ವರ ನಗರ ಸೇರಿದಂತೆ ನೂರಾರು ಬಡ ಮಕ್ಕಳಿಗೆ ಹಾಲು ವಿತರಣೆ ಮಾಡಲಾಯಿತು. ಕಲ್ಲ ನಾಗದೇವರಿಗೆ ಹಾಲು ಎರೆಯುವುದಕ್ಕಿಂತ ಬಡ ಮಕ್ಕಳಿಗೆ ನೀಡಬೇಕು. ಅದೆಷ್ಟೋ ಜನ ಆಹಾರವಿಲ್ಲದೆ, ಉಪವಾಸ ಇರುತ್ತಾರೆ. ಅಂತಹವರಿಗೆ ಹಾಲು, ಹಣ್ಣು ಊಟ ನೀಡಿ ಹಬ್ಬ ಆಚರಣೆ ಮಾಡಬೇಕು. ಕುಡಿಯುವ ಹಾಲನ್ನು ಕಲ್ಲ ನಾಗಕ್ಕೆ ಹಾಕಿ ಹಾಳು ಮಾಡಬೇಡಿ ಎಂದು ಹೊಸಮಠದ ಶ್ರೀಗಳು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ನಾಗೇಂದ್ರ ಕಡಕೋಳ, ಸಜ್ಜನರ್, ಶೋಭಾ ಮಾಗಾವಿ ಸೇರಿದಂತೆ ಮಠದ ಭಕ್ತರು ನಾಗರಪಂಚಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.