ಹಾಸನ: ರಾಜಕೀಯ ವೈಷಮ್ಯಕ್ಕೆ ಕಲ್ಲು ತೂರಾಟ ಮಾಡಿ ಮನೆಯ ಗಾಜನ್ನು ಒಡೆದು ಪುಡಿಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ಗ್ರಾಮದಲ್ಲಿ ನಡೆದಿದೆ.
ಕ್ಷುಲ್ಲಕ ರಾಂಪುರ ಗ್ರಾಮದಲ್ಲಿ ಜೆಡಿಎಸ್ ಮುಖಂಡರು ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಭಾನುವಾರ ಸಂಜೆ ಕಲ್ಲು ತೂರಾಟ ನಡೆಸಿ ಮನೆ ಹಾಗೂ ಬೈಕ್ ಜಖಂಗೊಳಿಸಿದ್ದಾರೆ. ಮನೆಯ ಕಿಟಕಿ ಗಾಜುಗಳು ಸಂಪೂರ್ಣ ಪುಡಿ ಪುಡಿಯಾಗಿದ್ದು, ಪರಿಕರಗಳು ಹಾಳಾಗಿವೆ.
ಜೆಡಿಎಸ್ನ ಸುರೇಶ್ ಹಾಗೂ ಮತ್ತವರ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಜೊತೆ ಗುರುತಿಸಿಕೊಂಡಿದ್ದ ಬಿಜೆಪಿ ಮುಖಂಡ ಶೇಖರಪ್ಪ ಎಂಬವರ ಮನೆ ಮೇಲೆ ದಾಳಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗೆಂದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮೀನಿಗೆ ದಾರಿ ಬಿಡುವ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಎರಡು ದಿನಗಳ ಹಿಂದೆ ಎನ್.ಆರ್. ಸಂತೋಷ್ ನಡೆಸಿದ ಪಾದಯಾತ್ರೆಯಲ್ಲಿ ಶೇಖರಪ್ಪ ಪಾಲ್ಗೊಂಡಿದ್ದರು. ಬಿಜೆಪಿ ಬಲವರ್ಧನೆಗೆ ಕಾರ್ಯಚಟುವಟಿಕೆ ಪ್ರಾರಂಭಿಸಿದ್ದರು. ಭಾನುವಾರದ ಹೊಡೆದಾಟಕ್ಕೆ ರಾಜಕೀಯವೂ ಕಾರಣ ಎನ್ನಲಾಗಿದೆ. ಸ್ಥಳದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬಿಡು ಬಿಟ್ಟಿದ್ದಾರೆ.