ನವದೆಹಲಿ: ಕಲ್ಲಿದ್ದಲು ವಲಯದಲ್ಲಿರುವ ಸರ್ಕಾರದ ಏಕಸ್ವಾಮ್ಯ ವ್ಯವಸ್ಥೆ ರದ್ದುಗೊಳಿಸಿ ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಗಣಿಗಾರಿಕೆಗಾಗಿ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ಹೊಸ ವ್ಯವಸ್ಥೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಇಂದು ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ. ದೇಶದ ಕಲ್ಲಿದ್ದಲು ವಲಯವು ದಶಕಗಳಿಂದ ಮೂಲೆಗುಂಪಾಗಿತ್ತು. ಹೀಗಾಗಿ ಇದನ್ನು ಸ್ಪರ್ಧೆಯಿಂದ ಆಚೆಗೆ ಇಡಲಾಗಿತ್ತು. ಈ ವಲಯದಲ್ಲಿ ಪಾರದರ್ಶಕತೆ ಒಂದು ದೊಡ್ಡ ಸವಾಲಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2014ರ ನಂತರ ಪರಿಸ್ಥಿತಿಯನ್ನು ಸುಧಾರಿಸಲು ಅನೇಕ ಹೆಜ್ಜೆಗಳನ್ನು ಇಟ್ಟಿದೆ. ಸದ್ಯ ಕೈಗೊಂಡ ಕ್ರಮಗಳಿಂದಾಗಿ ಕಲ್ಲಿದ್ದಲು ಕ್ಷೇತ್ರ ಬಲಗೊಂಡಿದೆ ಎಂದು ತಿಳಿಸಿದರು.
ಭಾರತ ಕೊರೊನಾ ವಿರುದ್ಧ ಹೋರಾಡುತ್ತಿದೆ. ಕೋವಿಡ್-19 ವೈರಸ್ಅನ್ನು ಭಾರತ ಅವಕಾಶವಾಗಿ ಬದಲಾಯಿಸಿಕೊಳ್ಳುತ್ತಿದೆ. ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ನಾಲ್ಕನೇ ದೊಡ್ಡ ದೇಶವಾದರೂ ನಾವು ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದೇವೆ. ಈಗ ಖಾಸಗಿ ಸಹಭಾಗಿತ್ವದಿಂದ ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಲಿದೆ. ಜೊತೆಗೆ ಉದ್ಯೋಗಾವಕಾಶಗಳು ಹೆಚ್ಚಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.
ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, “ದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗಿದ್ದ ನಿಬಂಧನೆಗಳನ್ನು ಸಡಿಲಗೊಳಿಸಿದ್ದು, ಸರಳ ಷರತ್ತುಗಳನ್ನು ಹಾಕಿ ಗಣಿಗಾರಿಗೆ ಪ್ರೊತ್ಸಾಹ ನೀಡಲಾಗುತ್ತಿದೆ. ಇದು ದೇಶದ ಉದ್ಯಮದಾರರಿಗೆ ಹೆಚ್ಚು ಅನುಕೂಲವಾಗಲಿದೆ. ದೇಶದಲ್ಲಿ ಬಳಕೆಯಾಗದೆ ಉಳಿದ ಕಲ್ಲಿದ್ದಲನ್ನು ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು. ‘ಆತ್ಮ ನಿರ್ಭರ್ ಭಾರತ್’ ಅಡಿ ಅತಿ ದೊಡ್ಡ ಹೆಜ್ಜೆ ಇಡಲಾಗಿದೆ” ಎಂದು ಹೇಳಿದರು.