– ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರೊಟೆಸ್ಟ್
ಬೆಂಗಳೂರು: ಸಿಲಿಕಾನ್ ಸಿಟಿಯ ಕಲಾಸಿಪಾಳ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರೀ ಹೈಡ್ರಾಮ ನಡೆದಿದೆ. ಕಾರ್ಪೊರೇಟರ್ ಪತಿ ಮೇಲೆ ಸೆಗಣಿ ಎಸೆದ ಆರೋಪವೊಂದು ವ್ಯಾಪಾರಿಗಳ ವಿರುದ್ಧ ಕೇಳಿಬಂದಿದೆ.
ಇಂದು ಮುಂಜಾನೆ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯ ಕಾರ್ಪೊರೇಟರ್ ಪ್ರತಿಭಾ ಧನರಾಜ್ ಪತಿ ಮೇಲೆ ವ್ಯಾಪಾರಿ ಹಾಗೂ ಕೆಲ ಪುಂಡರು ಈ ಕೃತ್ಯ ಎಸಗಿದ್ದಾರೆ ಎಂದು ಪ್ರತಿಭಾ ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದ್ದಾರೆ.
ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಅನಧಿಕೃತವಾಗಿ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಆಯುಕ್ತ ರವೀಂದ್ರ ಜೊತೆಯಾಗಿ ಕಾರ್ಪೊರೇಟರ್ ಪತಿ ಪರಿಶೀಲನೆಗೆ ಬಂದಿದ್ದರು. ಈ ವೇಳೆ ವ್ಯಾಪಾರಿಗಳು ಅಂಗಡಿ ತೆರವಿಗೆ ಮುಂದಾಗುತ್ತಿದ್ದಂತೆಯೇ ಕಾರ್ಪೊರೇಟರ್ ಪತಿ ಹಾಗೂ ವ್ಯಾಪಾರಿಗಳ ನಡುವೆ ವಾಗ್ವಾದ ನಡೆಯಿತು. ಇದೇ ಸಂದರ್ಭದಲ್ಲಿ ವ್ಯಾಪಾರಿಗಳು ತನ್ನ ಪತಿ ಮೇಲೆ ಸಗಣಿ ಎಸೆದಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಪ್ರತಿಭಾ, ಬೆಳಗ್ಗೆ 5:30ಕ್ಕೆ ಬರಲು ತಡವಾಯಿತು. ಅದಕ್ಕೆ ನನ್ನ ಗಂಡ ಮಾಜಿ ಕಾರ್ಪೊರೇಟರ್ ಜೊತೆ ಬಂದಿದ್ರು. ಅನಧಿಕೃತವಾಗಿ ಅಂಗಡಿ ತೆಗೆಯಲು ಅನುಮತಿ ಕೊಟ್ಟಿದು ಯಾರು ಎಂದಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ಕಾರ್ಪೊರೇಟರ್ ಪ್ರತಿಭಾ ಧನರಾಜ್ ಆರೋಪಿಸಿದ್ದಾರೆ.
ರೌಡಿಗಳು ಮಿನಿ ಮಾರುಕಟ್ಟೆ ಕ್ರಿಯೆಟ್ ಮಾಡಿದ್ರು. ನಿತ್ಯ ಒಂದು ಅಂಗಡಿಗೆ 500 ರೂ. ವಸೂಲಿ ಮಾಡುತ್ತಾ ಇದ್ದರು. ಸೆಂಥಿಲ್ ಹಾಗೂ ರಮೇಶ್ ಎಂಬವರು ದುಡ್ಡು ವಸೂಲಿ ಮಾಡ್ತಾ ಇದ್ದಾರೆ. ಹೀಗಾಗಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಬರುವವರೆಗೂ ಸ್ಥಳದಿಂದ ಏಳಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಧರಣಿಯಲ್ಲಿ ವಿವಿಪುರಂ ವಾರ್ಡ್ ಕಾರ್ಪೊರೆಟರ್ ವಾಣಿ ಸಹ ಭಾಗಿಯಾಗಿದ್ದಾರೆ.