ಕಲಾವಿದರಿಗೆ ಬಣ್ಣ ಹಚ್ಚಲು ಅವಕಾಶ ಮಾಡಿಕೊಟ್ಟ ಉಡುಪಿ ಡಿಸಿ

Public TV
1 Min Read
Udupi Theater Artists Memorandum to DC 1

ಉಡುಪಿ: ಕೊರೋನ ಮಹಾಮಾರಿ ಆರ್ಥಿಕತೆಗೆ, ಎಲ್ಲಾ ಸ್ತರದ ಜನಜೀವನಕ್ಕೆ ಕಾಟ ಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ 15-20 ನಾಟಕ ತಂಡಗಳು ವೃತ್ತಿಪರವಾಗಿ ನಾಟಕ ಪ್ರದರ್ಶನ ಮಾಡುತ್ತಿದ್ದು, ಕೋವಿಡ್ ಸಂದಿಗ್ಧದಿಂದ ಕಳೆದ 10 ತಿಂಗಳಿನಿಂದ ನಾಟಕ ಪ್ರದರ್ಶನವಾಗದೆ ಸಾವಿರಾರು ಕಲಾವಿದರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ.

ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ನಾಟಕ ಪ್ರದರ್ಶನಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ಜಿಲ್ಲೆಯ ವೃತ್ತಿಪರ ನಾಟಕ ತಂಡಗಳ ಪರವಾಗಿ ಸಮಾಜರತ್ನ ಲೀಲಾಧರ ಶೆಟ್ಟಿ ಕರಂದಾಡಿ ಅವರ ಮುಂದಾಳತ್ವದಲ್ಲಿ ತೆರಳಿದ ನಿಯೋಗವು, ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಬೇಡಿಕೆಯಿಟ್ಟಿದೆ.

Udupi Theater Artists Memorandum to DC 3

ಸಹಸ್ರಾರು ನಾಟಕ ಕಲಾವಿದರು ಹಾಗೂ ತಂತ್ರಜ್ಞರು ಆರ್ಥಿಕವಾಗಿ ನಾಟಕವನ್ನೇ ಅವಲಂಬಿಸಿದ್ದಾರೆ. ಪ್ರತೀ ಕಲಾವಿದರನ್ನು ಅವಲಂಬಿಸಿ ಅವರ ಕುಟುಂಬವಿದ್ದು, ದಿಕ್ಕು ತೋಚದಂತಾಗಿದೆ. ಆದ್ದರಿಂದ ನಾಟಕ ಪ್ರದರ್ಶನಕ್ಕೆ ಅನುಮತಿಸುವಂತೆ ಒತ್ತಾಯಿಸಿತು.

ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ತಕ್ಷಣ ಸ್ಪಂದಿಸಿ, ಸರ್ಕಾರದ ಕೋವಿಡ್-19 ನಿಯಮಗಳನ್ನು ಪಾಲಿಸಿಕೊಂಡು ನಾಟಕ ಪ್ರದರ್ಶನ ನಡೆಸಲು ಅನುಮತಿ ನೀಡಿದರು. ಜಿಲ್ಲಾಧಿಕಾರಿ ಯವರ ತ್ವರಿತ ಆದೇಶಕ್ಕೆ ಕಲಾವಿದರು ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

Udupi Theater Artists Memorandum to DC 4

ನಿಯೋಗದಲ್ಲಿ ಚೈತನ್ಯ ಕಲಾವಿದರು ಬೈಲೂರು ತಂಡದ ಪ್ರಸನ್ನ ಶೆಟ್ಟಿ, ಕಾಪು ರಂಗತರಂಗ ತಂಡದ ಶರತ್ ಉಚ್ಚಿಲ ಹಾಗೂ ಮರ್ವಿನ್ ಶಿರ್ವ, ತೆಲಿಕೆದ ತೆನಾಲಿ ಕಾರ್ಕಳ ತಂಡದ ಸುನೀಲ್ ನೆಲ್ಲಿಗುಡ್ಡೆ, ಅಭಿನಯ ಕಲಾವಿದರು ಉಡುಪಿ ತಂಡದ ಉಮೇಶ್ ಅಲೆವೂರು, ಕಾರ್ತಿಕ್ ಕಡೆಕಾರ್, ವಿಕ್ರಮ್ ಮಂಚಿ, ನವಸುಮ ಕೊಡವೂರು ತಂಡದ ಬಾಲಕೃಷ್ಣ ಕೊಡವೂರು, ಕಲಾಚಾವಡಿ ಉಡುಪಿ ತಂಡದ ಪ್ರಭಾಕರ್ ಆಚಾರ್ಯ ಮೂಡುಬೆಳ್ಳೆ, ಸಿಂಧೂರ ಕಲಾವಿದರು ಕಾರ್ಕಳ ತಂಡದ ಹಮೀದ್ ಮಿಯಾರು ಹಾಗೂ ಸಂದೀಪ್ ಬಾರಾಡಿ, ನಮ್ಮ ಕಲಾವಿದರು ಪಿತ್ರೋಡಿ ತಂಡದ ನವೀನ್ ಸಾಲ್ಯಾನ್ ಪಿತ್ರೋಡಿ, ಸಾಕ್ಷಿ ಕಲಾವಿದರು ಬೆಳಪು ತಂಡದ ಶುಭಕರ್ ಬೆಳಪು ಮೊದಲಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *