ಕಲಬುರಗಿಗೆ ಹೊಸ ಟೆನ್ಶನ್ – ಮುಂಬೈನಿಂದ 1,200ಕ್ಕೂ ಹೆಚ್ಚು ಕಾರ್ಮಿಕರು ರಿಟರ್ನ್

Public TV
1 Min Read
GLB

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ಹೆಚ್ಚಾದ ಹಿನ್ನೆಲೆಯಲ್ಲಿ ಜನ ಚಿಂತೆಗೀಡಾಗಿದ್ದಾರೆ. ಹೀಗಿರುವಾಗಲೇ ಮುಂಬೈನಿಂದ ಸಾವಿರಾರು ಕೂಲಿ ಕಾರ್ಮಿಕರು ವಿಶೇಷ ರೈಲು ಮೂಲಕ ಕಲಬುರಗಿಗೆ ತಡರಾತ್ರಿ ಆಗಮಿಸಿದ್ದಾರೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಹಾಟ್‍ಸ್ಪಾಟ್ ಕಲಬುರಗಿಗೆ ಹೊಸ ಟೆನ್ಶನ್ ಶುರುವಾಗಿದೆ. ಮುಂಬೈನಿಂದ ಸಾವಿರಾರು ವಲಸೆ ಕಾರ್ಮಿಕರು ಶ್ರಮಿಕ್ ಸ್ಪೆಷಲ್ ರೈಲಿನ ಮೂಲಕ ಕಲಬುರಗಿಗೆ ತಡರಾತ್ರಿ 2 ಗಂಟೆಗೆ ಬಂದಿಳಿದಿದ್ದಾರೆ. ಮುಂಬೈನಿಂದ ಬಂದಿಳಿದ ವಲಸಿಗ ಕಾರ್ಮಿಕರನ್ನು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಸೇರಿದಂತೆ ಹಲವು ಬಿಜೆಪಿ ನಾಯಕರು ಬರಮಾಡಿಕೊಂಡರು.

GLB 1

ಕುಟುಂಬ ಸಮೇತ ತವರಿಗೆ ಹಿಂತಿರುಗಿದ 1,200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ರೈಲು ನಿಲ್ದಾಣದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ನಂತರ ಸುವಿಧಾ ಆಪ್ ಮೂಲಕ ಎಲ್ಲರ ಮಾಹಿತಿಯನ್ನು ಸಂಗ್ರಹಿಸಿದ ಜಿಲ್ಲಾಡಳಿತ ಎಲ್ಲರನ್ನು ಅವರವರ ಊರುಗಳಿಗೆ ಬಸ್‍ಗಳಲ್ಲಿ ಕಳಿಸಿಕೊಟ್ಟಿತು. ಕಲಬುರಗಿ ರೈಲ್ವೇ ನಿಲ್ದಾಣದಿಂದ ವಲಸೆ ಕಾರ್ಮಿಕರನ್ನು ಹೊತ್ತ ಬಸ್‍ಗಳು ಚಿತ್ತಾಪುರ, ಚಂಚೋಳಿ, ಆಳಂದ, ಸೇಡಂ ತಾಲೂಕಿನ ಅವರವರ ಊರುಗಳಿಗೆ ಹೋಗಿದ್ದಾರೆ.

ವಲಸೆ ಕಾರ್ಮಿಕರನ್ನು ಅವರವರ ಊರುಗಳ ಶಾಲಾ, ಕಾಲೇಜು ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆತಂಕದ ವಿಚಾರ ಅಂದರೆ ಕಲಬುರಗಿ ಜಿಲ್ಲೆಗೆ ವಾಪಸ್ಸಾದ ವಲಸಿಗ ಕಾರ್ಮಿಕರಲ್ಲಿ ಹಲವರು ಮುಂಬೈ ಸೋಂಕು ಪೀಡಿತ ಧಾರಾವಿ ಸ್ಲಂ ಪ್ರದೇಶದಲ್ಲಿ ಇಷ್ಟು ದಿನ ವಾಸವಿದ್ದರು. ಇದೀಗ ಅವರೆಲ್ಲ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದು, ಇದರಲ್ಲಿ ಯಾರಿಗಾದರೂ ಸೋಂಕು ತಗುಲಿದರೆ ಏನು ಗತಿ ಎಂಬ ಭಯ ಕಲಬುರಗಿ ಜನತೆಯನ್ನು ಕಾಡುತ್ತಿದೆ.

GLB 2

ಹೀಗಾಗಿ ಈ ವಲಸಿಗ ಕಾರ್ಮಿಕರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಡಬೇಕಾಗಿದೆ. ಶಾಲಾ, ಕಾಲೇಜು ಕಟ್ಟಡಗಳಲ್ಲಿ ಸದ್ಯ ಕ್ವಾರಂಟೇನ್‍ನಲ್ಲಿರುವ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *