ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದಕ್ಕೆ ಆತಂಕ ಸೃಷ್ಟಿಯಾಗಿದೆ.
ಇಂದು ಬೆಳಗಿನ ಜಾವ ಕವಿವಿಯ ಗೆಸ್ಟಹೌಸ್ ಬಳಿ ಈ ಒಂಟಿ ಸಲಗವನ್ನ ನೋಡಿದ್ದ ಭದ್ರತಾ ಸಿಬ್ಬಂದಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಎರಡು ಗಂಟೆಗೂ ಹೆಚ್ಚು ಕಾಲ, ಕರ್ನಾಟಕ ವಿವಿ ಹಿಂಭಾಗದಲ್ಲಿರುವ ಅರಣ್ಯದಲ್ಲಿ ಹುಡುಕಿದ್ದರು. ಆದರೆ ಒಂಟಿ ಸಲಗ ಸಿಗದ ಹಿನ್ನೆಲೆ, ಸಂಜೆ ಮತ್ತೆ ಕಾರ್ಯಾಚರಣೆ ನಡೆಸುವ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಿಂದ ಈ ಒಂಟಿ ಸಲಗ ಬಂದಿರಬಹುದು ಎಂದು ಅಂದಾಜು ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಆಹಾರ ಅರಸಿ ಬಂದಿರಬಹುದು ಎಂದಿದ್ದಾರೆ. ಸಂಜೆ ಮತ್ತೆ ಈ ಆನೆ ಹೊರಗೆ ಬರಬಹುದು ಎಂದಿರುವ ಅಧಿಕಾರಿಗಳು, ಕರ್ನಾಟಕ ವಿವಿಯಲ್ಲಿರುವ ವಿದ್ಯಾರ್ಥಿಗಳು ಹಾಗೂ ಮನೆಯಲ್ಲಿರುವ ಜನರು ಯಾರೂ ಹೊರಗೆ ಬರಬಾರದು ಎಂದು ಮನವಿ ಮಾಡಿದರು.
ಇನ್ನು ಆನೆ ಬಂದಿದೆ ಎಂದು ಮಾಹಿತಿ ತಿಳಿದ ಕವಿವಿ ಶಾಲ್ಲಲಾ ಹಾಸ್ಟೆಲ್ ವಿದ್ಯಾರ್ಥಿಗಳು, ನೋಡಲು ಕಟ್ಟಡದ ಮೇಲೆ ನಿಂತಿದ್ದರು. ಈ ವೇಳೆ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿ ಘಟನೆ ಕೂಡಾ ನಡೆಯಿತು.