ಬೆಂಗಳೂರು: ಅನಂತಪುರ ಜಿಲ್ಲೆಯಲ್ಲಿ ಕರ್ನಾಟಕ ಪೊಲೀಸರೆಂದು ಹೇಳಿ ವ್ಯಕ್ತಿಯ ಅಪಹರಣಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಅನಂತಪುರ ಜಿಲ್ಲೆಯ ಬಿಂದೇಲ ಕಾಲೋನಿ ನಿವಾಸಿ ಸಿರಿವಲ್ಟಿ ವನ್ನೂರು ಎಂಬಾತನ ಅಪಹರಣಕ್ಕೆ ಯತ್ನ ನಡೆದಿದೆ. ಆದ್ರೆ ಸ್ಥಳೀಯರ ಸಹಾಯದಿಂದ ಅಪಹರಣ ಯತ್ನ ವಿಫಲವಾಗಿದೆ. ಅಪಹರಣಕ್ಕೆ ಕರ್ನಾಟಕದ ಇನ್ನೋವಾ ಕಾರು ಬಳಸಿರುವುದು ಪತ್ತೆಯಾಗಿದೆ.
ಸತೀಶ್ ಹಾಗೂ ಶ್ರೀಧರ್ ಎಂಬುವರು ಕರ್ನಾಟಕ ಪೊಲೀಸರೆಂದು ಹೇಳಿಕೊಂಡು ಅಪಹರಣಕ್ಕೆ ಯತ್ನಿಸಿದ್ದಾರೆ. ಅಪಹರಣಕ್ಕೆ ಯತ್ನಿಸಿದ ವೇಳೆ ಆರೋಪಿಗಳ ಬಳಿ ಮೊಬೈಲ್ ಒಂದು ಸಿಕ್ಕಿದ್ದು, ಕರ್ನಾಟಕ ಪೊಲೀಸ್ ಎಂದು ಹೇಳಿರೋದು ರೆಕಾರ್ಡ್ ಆಗಿದೆ.
ಕರ್ನಾಟಕ ಪೊಲೀಸರೆಂದು ಹೆಸರೇಳಿರುವ ವ್ಯಕ್ತಿಯ ನಕಲಿ ಗುರುತಿನ ಚೀಟಿ ಹಾಗೂ ಆತನ ಮೊಬೈಲ್ನಲ್ಲಿರುವ ಆಡಿಯೋ ನೀಡಿದ್ರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅನಂತಪುರ ಮಾಜಿ ಶಾಸಕ ಆರ್. ಪ್ರಭಾಕರ್ ಚೌಧರಿ ಕೂಡ ಆರೋಪಿಸಿದ್ದಾರೆ.
ಅಪಹರಣದ ಹಿಂದೆ ಅನಂತಪುರ ಜಿಲ್ಲೆಯ ರೌಡಿಶೀಟರ್ ಶಿರಿಶಾಲ ಶ್ರೀನಿವಾಸುಲು ಅಲಿಯಾಸ್ ಬಿಂದಲ ಸೀನ ಎಂಬಾತನ ಕೈವಾಡವಿದೆ ಎಂದು ಅಪಹರಣ ಯತ್ನಕ್ಕೆ ಒಳಗಾಗಿದ್ದ ಸಿರಿವಲ್ಟಿ ವನ್ನೂರು ಆರೋಪಿಸಿದ್ದಾರೆ. ಬಿಂದಲ ಸೀನ ಅನಂತಪುರದಲ್ಲಷ್ಟೇ ಅಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ಪೇಟೆಯಲ್ಲಿ ಖೋಟಾನೋಟು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.