ಬಳ್ಳಾರಿ: ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರನ್ನು ಬಂದ ಹತ್ತು ದಿನದಲ್ಲೇ ವರ್ಗಾವಣೆ ಮಾಡಲಾಗಿತ್ತು. ಆದರೆ ಅವಧಿ ಪೂರ್ವ ವರ್ಗಾವಣೆ ಮಾಡಿದ್ದರಿಂದ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದಿಂದ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದು ಮುಂದುವರೆದಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಗೆಹ್ಲೋಟ್ ಅವರ ಬಿಗಿ ಆಡಳಿತದಿಂದ ಪಾಲಿಕೆಯಲ್ಲಿ ತಮ್ಮ ಕೈ ಚಳಕ ನಡೆಯದ ವ್ಯಕ್ತಿಗಳು ಇವರ ವರ್ಗಾವಣೆಗೆ ಪ್ರಯತ್ನ ಮಾಡಿರಬಹುದು. ಜೊತೆಗೆ ಈ ಹುದ್ದೆಗೆ ಬರಲು ಪ್ರಯತ್ನಿಸಿದವರು ಲಂಚ ನೀಡಿ ಗೆಹ್ಲೋಟ್ ಅವರನ್ನು ವರ್ಗಾವಣೆ ಮಾಡಿಸಲು ಮುಂದಾಗಿರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆ ಇದ್ದಂತಹ ಪಾಲಿಕೆ ಆಯುಕ್ತೆ ತುಷಾರಮಣಿ ಅವರು ಸಹ ಆರಂಭದಲ್ಲಿ ತುಂಬಾ ಕಟ್ಟುನಿಟ್ಟಾದ ಕಾರಣ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಅವರೂ ಸಹ ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋಗಿ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು. ಆದರೆ ಅವರು ನಂತರದ ದಿನಗಳಲ್ಲಿ ತಮ್ಮ ಕಾರ್ಯಶೈಲಿಯಲ್ಲಿ ಬದಲಾಣವಣೆ ಮಾಡಿಕೊಂಡು ಕೆಲ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸಿ ಭ್ರಷ್ಟಾಚಾರದ ಕೂಪಕ್ಕೆ ಬಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗಿತ್ತು.