ಬೆಂಗಳೂರು: ಲಾಕ್ಡೌನ್ ಸಡಿಲ ಆಗಿದೆ. ಕಾಕತಾಳಿಯ ಎಂಬಂತೆ ರಾಜ್ಯದಲ್ಲಿ ಕೊರೊನಾ ಸುನಾಮಿ ಎದ್ದಿದೆ. ಕಳೆದ ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ. 400ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಮಹಾಮಾರಿ ಡೆಡ್ಲಿ ಕೊರೊನಾ ವೈರಸ್ ಕರುನಾಡಿಗೆ ಕಾಲಿಟ್ಟು 2 ತಿಂಗಳು ಕಳೆದಿದೆ. ವಿದೇಶದಿಂದ ಬಂದವರು, ನಂತರ ತಬ್ಲಿಘಿಗಳು, ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಕಾರ್ಮಿಕ, ಬಿಹಾರ ಕಾರ್ಮಿಕರು. ಈ ನಾಲ್ಕು ನಂಟು ರಾಜ್ಯದಲ್ಲಿ ಒಂದು ಹಂತದಲ್ಲಿ ಕೊರೊನಾ ಸುನಾಮಿಗೆ ಕಾರಣವಾಯಿತು. ಈ ನಂಟಿನ ಕಂಟಕ ತಣ್ಣಗಾಗುತ್ತಿದ್ದಂತೆ ರಾಜ್ಯ ಸರ್ಕಾರ ಬಹುತೇಕ ಲಾಕ್ಡೌನ್ ರಿಲೀಫ್ ಕೊಟ್ಟಿದೆ.
ಈಗ ಏಳು ರಾಜ್ಯಗಳು ಕರುನಾಡಿಗೆ ಕಂಟಕವಾಗುತ್ತಿವೆ. ದಿನಕ್ಕೊಂದು ರಾಜ್ಯ ಕರ್ನಾಟಕ ಜನರ ನೆಮ್ಮದಿಗೆಡಿಸಲು ಎಂಟ್ರಿ ಕೊಡುತ್ತಿದೆ. ಆರಂಭದಲ್ಲಿ ದೆಹಲಿಯ ಜಮಾತ್ ರಾಜ್ಯಕ್ಕೆ ದೊಡ್ಡ ಆಘಾತ ನೀಡಿತ್ತು. ನಂತರ ಅಜ್ಮೀರ್ ನಿಂದ ಬಂದವರಿಂದ, ಅಹ್ಮದಾಬಾದ್ನಿಂದ ಬಂದವರಿಂದ ಕಂಟಕ ಎದುರಾಗಿತ್ತು. ಆದರೆ ಈಗ ಲಾಕ್ ಓಪನ್ ಆಗುತ್ತಿದ್ದಂತೆ ಮಹಾರಾಷ್ಟ್ರದ ಮುಂಬೈ ಇಡೀ ಕರುನಾಡನ್ನ ಕೊರೊನಾ ಇಕ್ಕಟ್ಟಿಗೆ ಸಿಲುಕಿಸಿದೆ.
ಗುರುವಾರ ಒಂದೇ ದಿನ 147 ಮಂದಿಗೆ ಕೊರೊನಾ ಬಂದಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1609 ಆಗಿದೆ. ಹೆಲ್ತ್ ಬುಲೆಟಿನ್ನಲ್ಲಿ ಯಾವ್ಯಾವ ರಾಜ್ಯಗಳಿಂದ ಬಂದ ಎಷ್ಟೆಷ್ಟು ಮಂದಿಗೆ ಕೊರೊನಾ ಬಂದಿದೆ ಅನ್ನೋ ವಿವರವನ್ನು ನೋಡೋದಾದರೆ:
ಕರುನಾಡಿಗೆ ‘ಸಪ್ತ’ ಸಂಕಷ್ಟ
* ಮಹಾರಾಷ್ಟ್ರ ಲಿಂಕ್ – 100 ಕೇಸ್ (78 ಮುಂಬೈ, 22 ಕೇಸ್ ಮಹಾರಾಷ್ಟ್ರದ ಥಾಣೆ, ಪುಣೆ, ಪಾಲ್ಘರ್, ಮಲ್ಲಚಾಂದೀವಲ್ಲೀ, ಸಾಯಿಲ್, ಔರಂಗಾಬಾದ್)
* ತೆಲಂಗಾಣ ಲಿಂಕ್ – 5 ಕೇಸ್
* ತಮಿಳುನಾಡು ಲಿಂಕ್ – 6 ಕೇಸ್
* ಜಾರ್ಖಂಡ್ ಲಿಂಕ್ – 3 ಕೇಸ್
* ರಾಜಸ್ಥಾನ ಲಿಂಕ್ – 2 ಕೇಸ್ (ಅಜ್ಮೇರ್)
* ಛತ್ತೀಸ್ಘಡ ಲಿಂಕ್ – 1 ಕೇಸ್
* ಕೇರಳ ಲಿಂಕ್ – 9 ಕೇಸ್
ರಾಜ್ಯದ ಒಳಗಿರುವ ಮಂದಿ ಹೆಚ್ಚು ಕಡಿಮೆ ಸೇಫ್ ಆಗಿಯೇ ಇದ್ದಾರೆ. ನಮ್ಮ ರಾಜ್ಯಕ್ಕೆ ಈಗ ಅನ್ಯ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿರುವ ಜನರಿಂದ ಗಂಡಾಂತರ ಎದುರಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ ಮಹಾರಾಷ್ಟ್ರ, ಮುಂಬೈನಿಂದ ಬಂದವರಿಗೆ ಹೆಚ್ಚು ಸೋಂಕು ಪತ್ತೆಯಾಗುತ್ತದೆ. ತದನಂತರದಲ್ಲಿ ತಮಿಳುನಾಡು, ತೆಲಂಗಾಣ, ಕೇರಳ, ಛತ್ತೀಸ್ಘಡ, ಜಾರ್ಖಂಡ್, ರಾಜಸ್ಥಾನದಿಂದ ಬಂದವರಿಗೆ ಕೊರೊನಾ ಸೋಂಕು ತಗುಲಿದೆ.