ಬೆಂಗಳೂರು: ಕರ್ನಾಟಕಕ್ಕೆ ಮೂರು ತಿಂಗಳು ಕಾದಿದೆ ‘ಮಹಾ’ ಆಪತ್ತು ಕಾದಿದೆ ಎಂಬ ಸ್ಫೋಟಕ ಸತ್ಯವೊಂದು ತಜ್ಞರಿಂದ ಬಹಿರಂಗವಾಗಿದೆ.
ಶ್ರಮಿಕ್ ಟ್ರೈನ್, ಅಂತರ್ ರಾಜ್ಯ ಬಸ್ ಸೇವೆ ಇನ್ನೂ ಒಂದು ತಿಂಗಳು ಬೇಡ. ಅದರಲ್ಲೂ ಮಹಾರಾಷ್ಟ್ರಕ್ಕಂತೂ ಬಸ್ ಸೇವೆ ಬೇಡವೇ ಬೇಡ. ಒಂದು ವೇಳೆ ಕರೆತಂದರೂ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿ. ಹಾಗೆಯೇ ಹೆಚ್ಚಿನ ಜನರನ್ನ ಒಟ್ಟಿಗೆ ಕ್ವಾರಂಟೈನ್ ಮಾಡಬೇಡಿ ಎಂದು ತಜ್ಞರು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ಕೊಟ್ಟಿದ್ಯಾಕೆ?
ನಾನಾ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು 1.69 ಲಕ್ಷ ಜನ ಸೇವಾ ಸಿಂಧುವಿನಡಿ ನೋಂದಣಿ ಮಾಡಿಕೊಂಡಿದ್ದಾರೆ. 1.69 ಲಕ್ಷ ಜನರಲ್ಲಿ 43 ಸಾವಿರಕ್ಕೂ ಅಧಿಕ ಮಂದಿ ಮಹಾರಾಷ್ಟ್ರದಿಂದ ಬರುವವರಾಗಿದ್ದಾರೆ.
ಸರ್ಕಾರ ತಾತ್ಕಾಲಿಕವಾಗಿ ಮೇ 31ರ ವರೆಗೆ ಮಹಾರಾಷ್ಟ್ರದಿಂದ ಬರಲು ನೋ ಎಂಟ್ರಿ ಅಂದಿದೆ. ಆದರೆ ಈಗಾಗಲೇ ಸೋಮವಾರದವರೆಗೆ ಸೇವಾ ಸಿಂಧುವಿನಡಿ ನೋಂದಣಿ ಮಾಡಿಕೊಂಡವರಿಗೆ ಎಂಟ್ರಿಗೆ ಅನುವು ಮಾಡಿದೆ. ಅಂದರೆ ಒಂದು ಮಾಹಿತಿಯ ಪ್ರಕಾರ 43 ಸಾವಿರ ಜನ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲು ನೊಂದಾಣಿ ಮಾಡಿದ್ದಾರೆ. ಅಷ್ಟೂ ಜನರಿಗೆ ಅವಕಾಶ ಕೊಟ್ಟರೆ ರಾಜ್ಯಕ್ಕೆ ಕಂಟಕ ಕಟ್ಟಿಟ್ಟ ಬುತ್ತಿಯಾಗಲಿದೆ.
ಈಗಾಗಲೇ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಬರೋಬ್ಬರಿ ಐದು ಸಾವಿರ ಕ್ವಾರಂಟೈನ್ ಬೆಡ್ ರೆಡಿಯಾಗಿದೆ. ಅಂದರೆ ಕರ್ನಾಟಕ ಅತಿ ಹೆಚ್ಚು ನಿಗಾ ವಹಿಸಿ ಹೆಚ್ಚಿನ ಪ್ರತ್ಯೇಕ ಬೆಡ್ ಗಳ ವ್ಯವಸ್ಥೆ ಮಾಡಬೇಕು. ಬೇರೆ ರಾಜ್ಯದವರನ್ನು ಕ್ವಾರಂಟೈನ್ ಮಾಡಿದಂತೆ ಹೆಚ್ಚಿನ ಜನ್ರನ್ನು ಒಟ್ಟಿಗೆ ಹಾಕಿ ಕ್ವಾರಂಟೈನ್ ಮಾಡದಂತೆ ಸೂಚನೆ ನೀಡಲಾಗಿದೆ.
ಕರ್ನಾಟಕಕ್ಕೆ ಈಗಾಗಲೇ ಮುಂಬೈ ಮಹಾರಾಷ್ಟ್ರದಿಂದ ಬೆಟ್ಟ ಗುಡ್ಡ ಹತ್ತಿ ಹೈವೇ ತಪ್ಪಿಸಿ ಕಳ್ಳದಾರಿಯಲ್ಲಿ ಅನೇಕರು ಬಂದಾಗಿದೆ. ಇವರ ಲೆಕ್ಕ ಇನ್ನೂ ಸಿಕ್ಕಿಲ್ಲ. ಇವರು ಕೊರೊನಾ ಹಂಚಿದರೆ ಇನ್ನೂ ಮೂರು ತಿಂಗಳು ರಾಜ್ಯಕ್ಕೆ ಅಪಾಯ ಕಾದಿದೆ. ಜೂನ್ ವೇಳೆ ಇನ್ನಷ್ಟು ಲಾಕ್ ಡೌನ್ ಸಡಿಲಿಕೆಯಾಗುತ್ತೆ. ಮತ್ತೆ ಮಹಾರಾಷ್ಟ್ರ-ಕರ್ನಾಟಕದ ಮಧ್ಯೆ ಓಡಾಟ ಶುರುವಾಗುತ್ತೆ. ಆಗ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಲಿವೆ.
ಶ್ರಮಿಕ್ ಟ್ರೈನ್ ಸೇರಿದಂತೆ ಅಂತರ್ ರಾಜ್ಯ ಬಸ್ ಕೂಡ ಒಂದು ತಿಂಗಳು ಮಹಾರಾಷ್ಟ್ರಕ್ಕೆ ಬೇಡವೇ ಬೇಡ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇನ್ಮುಂದೆ ಏಕಾಏಕಿ ಕರೆದುಕೊಂಡು ಬರಬೇಡಿ. ಒಬ್ಬರಿಗೆ ಕೊರೊನಾ ಇದ್ದರೂ ಇಡೀ ಬಸ್ಸಿನ ಪ್ರಯಾಣಿಕರಿಗೆ ಹಬ್ಬುತ್ತೆ. ಅಲ್ಲದೆ ಅನ್ಯ ರಾಜ್ಯದಿಂದ ಇಲ್ಲಿಗೆ ಕರೆದುಕೊಂಡು ಬರುವ ಮೊದಲು ಕೊರೊನಾ ಚೆಕ್ ಮಾಡಿಸುವಂತೆ ಕಡ್ಡಾಯ ಸೂಚನೆಗೆ ತಜ್ಞರು ಶಿಫಾರಸು ಮಾಡಿದ್ದಾರೆ.