ಬೆಂಗಳೂರು: ಮೇ ಮೂರನೇ ವಾರದವರೆಗೆ ಕರ್ನಾಟಕ ದೇಶಕ್ಕೆ ಮಾದರಿಯಾಗಿತ್ತು. ಆದರೆ ಯಾವಾಗ ಮಹಾರಾಷ್ಟ್ರದಿಂದ ವಲಸೆಗೆ ಅನುಮತಿ ಸಿಕ್ಕಿತೋ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ರಾಕೆಟ್ ವೇಗದಲ್ಲಿ ಏರಿಕೆ ಕಾಣುತ್ತಿದೆ.
ಹೌದು. ಕರ್ನಾಟಕಕ್ಕೆ ಮಹಾರಾಷ್ಟ್ರದಿಂದಲೇ ಕೊರೋನಾ ಸಂಚಕಾರ ಎದುರಾಗಿದೆ. ಒಟ್ಟು 3,221 ಪ್ರಕರಣದಲ್ಲಿ ಮಹಾರಾಷ್ಟ್ರದ ಪಾಲು 1,707. ಶೇ.52ರಷ್ಟು ಪ್ರಕರಣಗಳು ಮಹಾರಾಷ್ಟ್ರದ ನಂಟು ಇರುವ ಕಾರಣ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಲೇ ಇದೆ.
ಕೊರೊನಾ ಬಂದಿರುವ ಕರ್ನಾಟಕದ 27 ಜಿಲ್ಲೆಗಳಿಗೆ ಮಹಾರಾಷ್ಟ್ರ ಸಂಪರ್ಕವಿದ್ದು, ಈಗ ರೈಲು ಸಂಚಾರ ಆರಂಭಗೊಂಡರೆ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಭಾನುವಾರ 221 ಮಂದಿ ಬಿಡುಗಡೆಯಾಗಿದ್ದು, 1950 ಸಕ್ರಿಯ ಪ್ರಕರಣಗಳಿವೆ. ಒಟ್ಟು 51 ಮಂದಿ ರಾಜ್ಯದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. 15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾ ಸಂಪರ್ಕ – ಯಾವ ಜಿಲ್ಲೆಯಲ್ಲಿ ಎಷ್ಟು?
ಭಾನುವಾರ ಮಹಾರಾಷ್ಟ್ರದಿಂದ 252 ಮಂದಿ ಸೇರಿ ಒಟ್ಟು 1707 ಮಂದಿಗೆ ಸೋಂಕು ಬಂದಿದೆ. ಮಂಡ್ಯ 245, ಯಾದಗಿರಿ 279, ರಾಯಚೂರು 211, ಕಲಬುರಗಿ 188, ಹಾಸನ 140, ಉಡುಪಿ 139, ಚಿಕ್ಕಬಳ್ಳಾಪುರ 104, ಬೀದರ್ 85, ವಿಜಯಪುರ 66, ದಕ್ಷಿಣ ಕನ್ನಡ 56, ಉತ್ತರ ಕನ್ನಡ 37, ಬೆಳಗಾವಿ 21, ಧಾರವಾಡ 20, ಬಳ್ಳಾರಿ 16, ಚಿಕ್ಕಮಗಳೂರು 14, ತುಮಕೂರು 14, ಹಾವೇರಿ 13, ಶಿವಮೊಗ್ಗ 12, ಗದಗ 5, ಬೆಂಗಳೂರು 4, ಬೆಂಗಳೂರು ಗ್ರಾ. 4, ಮೈಸೂರು 4, ಕೊಪ್ಪಳ 2, ಬಾಗಲಕೋಟೆ 2, ಕೊಡಗು 1.